ನವದೆಹಲಿ: ಭಾರತೀಯ ಸೇನಾ ಯೋಧರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯನ್ನು ಹೊರಡಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯುದ್ಧದಲ್ಲಿ ಗಾಯಗೊಂಡ ಅಥವಾ ಮಡಿದ ಎಲ್ಲಾ ವಿಭಾಗದ ಯೋಧರು ಹಾಗೂ ಕುಟುಂಬ ಸದಸ್ಯರಿಗೂ ನೀಡಲಾಗುವ ಆರ್ಥಿಕ ನೆರವಿನ ಪ್ರಮಾಣವನ್ನು ಹೆಚ್ಚಳಗೊಳಿಸಿ ಆದೇಶ ಹೊರಡಿಸಿದ್ದಾರೆ.
ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ, ಮಡಿದ ಯೋಧರ ಕುಟುಂಬ ಸದಸ್ಯರಿಗೆ (ಎಬಿಸಿಡಬ್ಲ್ಯುಎಫ್) ನ ಅಡಿಯಲ್ಲಿ ನೀಡಲಾಗುವ ಆರ್ಥಿಕ ನೆರವನ್ನು ರಾಜನಾಥ್ ಸಿಂಗ್ 2 ಲಕ್ಷಗಳಿಂದ 8 ಲಕ್ಷಕ್ಕೆ ಏರಿಕೆ ಮಾಡಿದ್ದಾರೆ.
ಯುದ್ಧದಲ್ಲಿ ಮೃತಪಟ್ಟಿದ್ದರೆ ಅಥವಾ ಶೇ.60 ರಷ್ಟು ವಿಕಲಾಂಗತೆಗೆ ತುತ್ತಾಗಿದ್ದರೆ ಅಂತಹ ಯೋಧರು, ಯೋಧರ ಕುಟುಂಬ ಸದಸ್ಯರಿಗೆ ಈ ವರೆಗೂ 2 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿತ್ತು. ಶೇ.60 ಕ್ಕಿಂತ ಕಡಿಮೆ ವಿಕಲಾಂಗತೆ ಎದುರಿಸಿದ ಯೋಧರಿಗೆ 1 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಈಗ ಈ ಮೊತ್ತವನ್ನು 8 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಈಗಿರುವ ಹಲವು ಯೋಧರ ಕಲ್ಯಾಣ ಯೋಜನೆಗಳ ಜೊತೆಗೆ ಈ ಯೋಜನೆ ಅನ್ವಯವಾಗಲಿದೆ.