ದೇಶ

ಸಂವಿಧಾನ ವಿಧಿ 370 ರದ್ದು: ಗಡಿ ನಿಯಂತ್ರಣ ರೇಖೆ ಬಳಿ ಜೆಎಲ್ ಕೆಎಫ್ ನಿಂದ ಪ್ರತಿಭಟನಾ ಮೆರವಣಿಗೆ 

Sumana Upadhyaya

ಇಸ್ಲಾಮಾಬಾದ್: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿರುವ ಭಾರತ ಸರ್ಕಾರದ ನಡೆಯನ್ನು ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಜನರು ಭಾನುವಾರ ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ಮೆರವಣಿಗೆ ಸಾಗಿ ಪ್ರತಿಭಟನೆ ನಡೆಸಿದರು.


ಪ್ರತಿಭಟನೆಯಲ್ಲಿ ತೊಡಗುವವರು ಗಡಿ ನಿಯಂತ್ರಣ ರೇಖೆ ದಾಟಿ ಆಚೆ ಹೋಗದಂತೆ ನಿನ್ನೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದರು. ಮಾನವೀಯ ನೆಲೆಯಲ್ಲಿ ಕಾಶ್ಮೀರಿ ಜನತೆಗೆ ಸಹಾಯ ಮಾಡಲು ಹೋದರೆ ಭಾರತೀಯ ಸೇನೆಯ ಕೈಗೆ ಅನವಶ್ಯಕವಾಗಿ ಸಿಕ್ಕಿಹಾಕಿಕೊಳ್ಳಬೇಕಾಗಬಹುದು ಎಂದು ಪಾಕ್ ಆಕ್ರಮಿತ ಕಾಶ್ಮೀರ ಜನತೆಗೆ ಹೇಳಿದ್ದರು.


ಇಂದಿನ ಪ್ರತಿಭಟನೆಯಲ್ಲಿ ಬಹುಪಾಲು ಮಂದಿ ಯುವಜನತೆಯಿದ್ದರು. ಅವರು ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಮುಜಾಫರಬಾದ್ ನಿಂದ ಗಾರ್ಗಿ ದುಪಟ್ಟಗೆ ಮೆರವಣಿಗೆ ಸಾಗಿದರು. ಮುಜಾಫರಬಾದ್-ಶ್ರೀನಗರ ಹೆದ್ದಾರಿಯ ಗಡಿ ನಿಯಂತ್ರಣ ರೇಖೆ ಬಳಿ ಪ್ರತಿಭಟನೆ ಸಾಗಿದರು. ಪ್ರತಿಭಟನೆ ಮೆರವಣಿಗೆಯನ್ನು ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್ಎಫ್) ಹಮ್ಮಿಕೊಂಡಿತ್ತು. ಗಡಿ ನಿಯಂತ್ರಣ ರೇಖೆ ದಾಟಿ ಹೋಗುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದರು. ಚಕೋತಿಗೆ ತೆರಳಿದ ಅವರನ್ನು ಅಧಿಕಾರಿಗಳು ತಡೆದರು.


ಈ ಮಧ್ಯೆ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ ಅಮೆರಿಕಾದ ಸೆನೆಟರ್ ಕ್ರಿಸ್ ವಾನ್ ಹೊಲ್ಲೆನ್ ಅವರಿಗೆ ಗಡಿ ನಿಯಂತ್ರಣ ರೇಖೆ ಬಳಿ ಬಂದು ವಾಸ್ತವ ಪರಿಸ್ಥಿತಿಯನ್ನು ನೋಡುವಂತೆ ಒತ್ತಾಯಿಸಿದ್ದಾರೆ.

SCROLL FOR NEXT