ದೇಶ

ಪಿಎಂಸಿ ಬ್ಯಾಂಕ್ ಹಗರಣ; ಠೇವಣಿ ಇಟ್ಟಿದ್ದ ಮಹಿಳಾ ವೈದ್ಯೆ ಆತ್ಮಹತ್ಯೆ, ಸಾವಿನ ಸಂಖ್ಯೆ 3ಕ್ಕೆ ಏರಿಕೆ

Srinivasamurthy VN

ಮುಂಬೈ: ಮಹಾರಾಷ್ಟ್ರ-ಪಂಜಾಬ್ ಸಹಕಾರ (ಪಿಎಂಸಿ) ಬ್ಯಾಂಕ್ ಹಗರಣ ಮತ್ತೊಬ್ಬರನ್ನು ಬಲಿಪಡೆದುಕೊಂಡಿದೆ. ತೀವ್ರ ಬಿಕ್ಕಟ್ಟಿಗೆ ಒಳಗಾಗಿರುವ ಪಿಎಂಸಿ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದ ಮುಂಬೈ ಮೂಲದ ಮಹಿಳಾ ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಆ ಮೂಲಕ ಪ್ರಕರಣದಿಂದಾಗಿ ವಿವಿಧ ಸಂದರ್ಭಗಳಲ್ಲಿ ಸಾವಿಗೀಡಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.  ಇನ್ನು ಆತ್ಮಹತ್ಯೆಗೀಡಾದ ಸಂತ್ರಸ್ತೆಯನ್ನು ಡಾ. ನಿವೇದಿತಾ ಬಿಜ್ಲಾನಿ (39) ಎಂದು ಗುರುತಿಸಲಾಗಿದೆ. ಪಿಎಂಸಿ ಠೇವಣಿದಾರ ಸಂಜಯ್ ಗುಲಾಟಿ ಆತ್ಮಹತ್ಯೆ ಮಾಡಿಕೊಂಡ ದಿನವೇ ಈ ಘಟನೆ ಬೆಳಕಿಗೆ ಬಂದಿರುವುದು ಗಮನಾರ್ಹ, ಪೊಲೀಸರ ಮಾಹಿತಿ ಪ್ರಕಾರ, ವೈದ್ಯಕೀಯ ಸ್ನಾತಕೋತ್ತರ ಪಡೆದಿರುವ ಬಿಜ್ಲಾನಿ ಸೋಮವಾರ ಸಂಜೆ  ಸಬ್ಅರ್ಬನ್  ವರ್ಸೋವಾ ಪ್ರದೇಶದ ನಿವಾಸದಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಾ. ನಿವೇದಿತಾ ಬಿಜ್ಲಾನಿ ಪಿಎಂಸಿ ಬ್ಯಾಂಕಿನಲ್ಲಿ 1 ಕೋಟಿ ರೂ ಠೇವಣಿ ಇರಿಸಿದ್ದರು ಎಂದು ಆಕೆಯ ತಂದೆ ತಿಳಿಸಿದ್ದಾರೆ. ಮತ್ತೊಂದೆಡೆ, ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದ ನಿವೇದಿತಾ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಆಕೆಯ ಸಾವಿಗೂ ಪಿ ಎಂ ಸಿ ಬ್ಯಾಂಕ್ ಬಿಕ್ಕಟ್ಟಿಗೂ ಸಂಬಂಧ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪಿಎಂಸಿ ಬ್ಯಾಂಕಿನ ಮತ್ತೊಬ್ಬ ಠೇವಣಿದಾರ ಫಾತಿಮಾಲ್ ಪಂಜಾಬಿ ಮಂಗಳವಾರ ನಿಧನ ಹೊಂದಿದ್ದರು.  ಬ್ಯಾಂಕ್ ಬಿಕ್ಕಟ್ಟಿನಿಂದಾಗಿ  ತೀವ್ರ ಇಕ್ಕಟ್ಟಿಗೆ ಒಳಗಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

4.355 ಕೋಟಿ ರೂ.ಗಳ ಹಗರಣ ನಡೆದಿರುವ ಪಿಎಂಸಿ ಬ್ಯಾಂಕ್‌ಗೆ ಸಂಬಂಧಿಸಿದ ಗ್ರಾಹಕರ ವಹಿವಾಟಿನ ಮೇಲೆ  ಆರ್ ಬಿ ಐ ವಿಧಿಸಿರುವ  ನಿರ್ಬಂಧಗಳ ಕಾರಣ ಠೇವಣಿದಾರರು ತ್ವರಿತವಾಗಿ ತಮ್ಮ ಹಣ  ಹಿಂಪಡೆಯಲು ಸಾಧ್ಯವಾಗದೆ ತೀವ್ರ ತೊಂದರೆಗೆ ಒಳಗಾಗಿದ್ದಾರೆ.

SCROLL FOR NEXT