ದೇಶ

ಐಎನ್‌ಎಕ್ಸ್ ಮೀಡಿಯಾ ಹಗರಣ: ಮಾಜಿ ಸಚಿವ ಚಿದಂಬರಂಗೆ ಜಾಮೀನು

Shilpa D

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಕಳೆದ ಶುಕ್ರವಾರ ಚಿದಂಬರಂ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದ್ದು ಇಂದು ತೀರ್ಪು ಪ್ರಕಟಿಸಿದೆ. 

ಸದ್ಯ ಚಿದಂಬರಂ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ. ಐಎನ್‌ಎಕ್ಸ್‌ ಮೀಡಿಯಾಗೆ ವಿದೇಶಿ ದೇಣಿಗೆ ಪಡೆಯಲು ಅನುಮತಿ ನೀಡಲೆಂದು ಯುಪಿಎ ಆಡಳಿತ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು ತಮ್ಮ ಪ್ರಭಾವ ಬಳಸಿದ್ದರು. 

ಇದಕ್ಕೆ ಪ್ರತಿಯಾಗಿ ಅವರು ಐಎನ್‌ಎಕ್ಸ್‌ ಮೀಡಿಯಾ ಕಂಪನಿಯಿಂದ ತಮ್ಮ ಪುತ್ರ ಕಾರ್ತಿಗೆ ಸಹಾಯ ಮಾಡಲು ಆಗ್ರಹಿಸಿದ್ದರು. ಜತೆಗೆ ಕಿಕ್‌ಬ್ಯಾಕ್‌ ಕೂಡ ಪಡೆದಿದ್ದರು,' ಎಂಬ ಆರೋಪ ಆಧರಿಸಿ 2017ರ ಮೇ 15ರಂದು ಚಿದಂಬರಂ ಅವರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. 

ಈ ಹಿಂದೆ ಚಿದಂಬರಂ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಕಾಂಗ್ರೆಸ್ ನಾಯಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

SCROLL FOR NEXT