ದೇಶ

ತಾಜ್ ಸಿಟಿಯಲ್ಲಿ ಬೆಂಕಿ ಅವಘಡ: ಧಗಧಗನೆ ಹೊತ್ತಿ ಉರಿದ ದೀಪಾವಳಿ ಪಟಾಕಿ ಮಳಿಗೆಗಳು!

Nagaraja AB

ಆಗ್ರಾ:  ಇಲ್ಲಿನ  ಕಾಂಟ್ ರೈಲ್ವೆ ನಿಲ್ದಾಣ ಸಮೀಪದಲ್ಲಿನ ಸುಲ್ತಾನ್ ಪುರದಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿದ್ದ ಪಟಾಕಿ ಮಳಿಗೆಗಳಲ್ಲಿ  ಭಾರಿ ಬೆಂಕಿ ಅವಘಡ ಉಂಟಾಗಿದ್ದು, ದೀಪಾವಳಿ ಪಟಾಕಿ ಮಳಿಗೆಗಳು ಧಗಧಗನೆ ಹೊತ್ತಿ ಉರಿದಿವೆ. 

 ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಹರಡದಂತೆ ನಿಯಂತ್ರಿಸಿದ್ದಾರೆ ಎಂದು ಆಗ್ರಾ ಹಿರಿಯ ಪೊಲೀಸ್ ಮಹಾನಿರ್ದೇಶಕ ಬಾಬ್ಲು ಸಿಂಗ್ ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಳ್ಳಲು ಕಾರಣ ತಿಳಿದುಬಂದಿಲ್ಲ. ಆದರೆ, ಪಟಾಕಿ ಮಳಿಗೆಗಳ ಸಮೀಪದಲ್ಲಿನ ಎನ್ ಸಿ ವೇದಿಕೆ ಇಂಟರ್ ಕಾಲೇಜ್ ಮೈದಾನದಲ್ಲಿ ಬಾಲಕನೊಬ್ಬ ಪಟಾಕಿಗೆ ಬೆಂಕಿ ಹಚ್ಚಿದ್ದೆ ಇದಕ್ಕೆ ಕಾರಣ ಎಂದು ಅಂಗಡಿ ಮಾಲೀಕರೊಬ್ಬರು ಆಪಾದಿಸಿದ್ದಾರೆ.

ಬೆಂಕಿಯ ಜ್ವಾಲೆಯಿಂದಾಗಿ ತಾತ್ಕಾಲಿಕವಾಗಿ ತೆರೆಯಲಾಗಿದ್ದ ಏಳು ಅಂಗಡಿ ಮಳಿಗೆಗಳು ಸಂಪೂರ್ಣವಾಗಿ ಹಾಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ, ಆದರೆ, ಅನೇಕ ಬೈಕ್ ಗಳು ಬೆಂಕಿಗೆ ಅಹುತಿಯಾಗಿವೆ ಎಂದು ಪ್ರತ್ಯೇಕ್ಷದರ್ಶಿಗಳು ಹೇಳಿದ್ದಾರೆ.

ಆಗ್ರಾದಲ್ಲಿನ ವಿವಿಧ ಕಡೆಗಳಲ್ಲಿ 17 ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ ಆದರೆ, ತುರ್ತು ಬೆಂಕಿ ನಿರೋಧಕ ಸಲಕರಣಗಳನ್ನು ಬಳಸುತ್ತಿಲ್ಲ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT