ನವದೆಹಲಿ: ಬೇಟಿ ಬಚಾವೊ-ಬೇಟಿ ಪಡಾವೊ ಅಭಿಯಾನದಲ್ಲಿ ಉತ್ತಮ ಸಾಧನೆ ತೋರಿದ ಗದಗ ಜಿಲ್ಲೆಗೆ ಪ್ರಶಸ್ತಿಯ ಗರಿ ಮೂಡಿದೆ.ಬೇಟಿ ಬಚಾವೊ- ಬೇಟಿ ಪಡಾವೊ' ಯೋಜನೆ ಯಶಸ್ಸು ಆಚರಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ, ಕಳೆದ ಐದು ವರ್ಷಗಳಲ್ಲಿ ಲಿಂಗಾನುಪಾತ ಸುಧಾರಿಸಿದ ಐದು ರಾಜ್ಯಗಳು ಮತ್ತು 10 ಜಿಲ್ಲೆಗಳಿಗೆ ಶುಕ್ರವಾರ ಪ್ರಶಸ್ತಿ ಪ್ರದಾನ ಮಾಡಿದರು.
ಇದಲ್ಲದೆ, ಜನಸಾಮಾನ್ಯರಲ್ಲಿ ಈ ಕುರಿತಂತೆ ಜಾಗೃತಿ ಮೂಡಿಸುವಲ್ಲಿ ಶ್ಲಾಘನೀಯ ಕಾರ್ಯ ಮೆಚ್ಚಿ ಹರಿಯಾಣ, ಉತ್ತರಾಖಂಡ, ದೆಹಲಿ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ಹಾಗೂ 10 ಜಿಲ್ಲೆಗಳನ್ನು ಸಚಿವರು ಸನ್ಮಾನಿಸಿದರು.
ಈ ಯೋಜನೆ ಬಗ್ಗೆ ಪರಿಣಾಮಕಾರಿ ಜಾಗೃತಿ ಮೂಡಿಸಿದ ಜಿಲ್ಲೆಗಳ ಪೈಕಿ, ಕರ್ನಾಟಕದ ಗದಗ, ತಮಿಳುನಾಡಿನ ತಿರುವಳ್ಳೂರ್, ಗುಜರಾತ್ನ ಅಹಮದಾಬಾದ್, ಹಿಮಾಚಲ ಪ್ರದೇಶದ ಮಂಡಿ, ಜಮ್ಮು ಮತ್ತು ಕಾಶ್ಮೀರದ ಕಿಶತ್ವಾರ್, , ಹಿಮಾಚಲ ಪ್ರದೇಶದ ಶಿಮ್ಲಾ, ನಾಗಾಲ್ಯಾಂಡ್ನ ವೊಖಾ, ಹಿಮಾಚಲ ಪ್ರದೇಶದ ಸಿರ್ಮೌರ್ ಮತ್ತು ರಾಜಸ್ಥಾನದ ನಾಗೌರ್ ಸೇರಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ಅರುಣಾಚಲ ಪ್ರದೇಶದ ಪೂರ್ವ ಕಾಮಂಗ್ ನ ಅತ್ಯುತ್ತಮ ಸಾಧನೆಯನ್ನು ಶ್ಲಾಘಿಸಿದ ಅವರು, ಈ ಪ್ರದೇಶ ಲಿಂಗಾನುಪಾತದಲ್ಲಿ ಗಮನಾರ್ಹ ಬದಲಾವಣೆ ತೋರಿದ್ದು, 2014-15ರಲ್ಲಿ 1000 ಗಂಡು ಮಕ್ಕಳಿಗೆ 807 ಹೆಣ್ಣುಮಕ್ಕಳಿದ್ದರೆ, ಈಗ 1000 ಗಂಡು ಮಕ್ಕಳಿಗೆ 1039 ಹೆಣ್ಣು ಮಕ್ಕಳಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ರವೀಂದರ್ ಪೊವಾರ್ ಮಾತನಾಡಿ, ' ಲಿಂಗಾನುಪಾತ ಕಡಿಮೆಯಾಗುತ್ತಿರುವುದು ಸರ್ಕಾರಕ್ಕೆ ಕಳವಳಕಾರಿ ವಿಷಯವಾಗಿದೆ. ಹುಟ್ಟುವುದರಿಂದ ಹಿಡಿದು ಹೆಣ್ಣು ಮಗು ಘನತೆಯಿಂದ ಬದುಕು ನಡೆಸುವ ಹಕ್ಕುಗಳನ್ನು ಸಂರಕ್ಷಿಸುವುದು ಬೇಟಿ ಬಚಾವೊ- ಬೇಟಿ ಪಡಾವೊ ಯೋಜನೆಯ ಗುರಿಯಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಅವರನ್ನು ಸಶಕ್ತಗೊಳಿಸುವುದು ಮುಖ್ಯ ಗುರಿಯಾಗಿದೆ ಎಂದು ಹೇಳಿದರು.