ದೇಶ

ಸ್ವಚ್ಛತಾ ಕ್ರಿಯಾ ಯೋಜನೆ: ರೈಲ್ವೆ ಸಚಿವಾಲಯಕ್ಕೆ ಪ್ರಶಸ್ತಿಯ ಗರಿ

Lingaraj Badiger

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2018-19ನೇ ಸಾಲಿನ ಸ್ವಚ್ಛತಾ ಕ್ರಿಯಾ ಯೋಜನೆಯ ಅತ್ಯುತ್ತಮ ಅನುಷ್ಠಾನಕ್ಕಾಗಿ ರೈಲ್ವೆ ಸಚಿವಾಲಯಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಪ್ರಶಸ್ತಿ ಸ್ವೀಕರಿಸಿದರು.

ಇದೇ ವೇಳೆ ಸ್ವಚ್ಛ ಭಾರತ್ ಮಿಷನ್ ಉಪಕ್ರಮದಡಿಯಲ್ಲಿ ರಾಷ್ಟ್ರಪತಿಯವರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈಗೆ ಅತ್ಯುತ್ತಮ ಸ್ವಚ್ಛ ಐಕಾನಿಕ್ ಪ್ಲೇಸ್ ಪ್ರಶಸ್ತಿ ನೀಡಿ ಗೌರವಿಸಿದರು.

2018ರ ಸ್ವಚ್ಛತಾ ಶ್ರೇಣಿ ಸಮೀಕ್ಷೆಯ ಪ್ರಕಾರ ಮೂರು ಅತ್ಯುತ್ತಮ ನಿಲ್ದಾಣಗಳ ವಿಭಾಗದಲ್ಲಿ ಜೋಧ್‌ಪುರ, ಜೈಪುರ ಮತ್ತು ತಿರುಪತಿಗೆ ಪ್ರಶಸ್ತಿ ನೀಡಲಾಯಿತು.

ದೇಶದ ಬಹುದೊಡ್ಡ ಸಾರ್ವಜನಿಕ ಸೇವೆ ಎನಿಸಿಕೊಂಡಿರುವ ರೈಲ್ವೆಯು ಸ್ವಚ್ಛತಾ ಯೋಜನೆಯ ಅನುಷ್ಠಾನಕ್ಕಾಗಿ 2018-10ನೇ ಸಾಲಿನಲ್ಲಿ 3 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ.

ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ರೈಲ್ವೆ ವಲಯಗಳ ಪ್ರಧಾನ ವ್ಯವಸ್ಥಾಪಕರೊಡನೆ ನಿಯಮಿತವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸಿ ಸ್ವಚ್ಛತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ರೈಲ್ವೆ ವಲಯಗಳ ಪ್ರಧಾನ ವ್ಯವಸ್ಥಾಪಕರನ್ನು ಅಭಿನಂದಿಸಿರುವ ಅವರು, ಎಲ್ಲರ ಸತತ ಪ್ರಯತ್ನದಿಂದ ಸ್ವಚ್ಛತಾ ಮಹೋತ್ಸವದಲ್ಲಿ ರೈಲ್ವೆ ಇಲಾಖೆ ಪ್ರಶಸ್ತಿ ಪಡೆದುಕೊಂಡಿದೆ ಎಂದು ಹೇಳಿದ್ದು, ರೈಲುಗಳು ಹಾಗೂ ನಿಲ್ದಾಣದಲ್ಲಿನ ಸ್ವಚ್ಛತೆಗೆ ಮತ್ತಷ್ಟು ಗಮನ ಹರಿಸುವ ಬಗ್ಗೆ ಚರ್ಚಿಸಿದ್ದಾರೆ.

SCROLL FOR NEXT