ದೇಶ

ದಲಿತರು ಎಂದರೆ ಅಸ್ಪೃಶ್ಯರೇ? ವಿವಾದಕ್ಕಿಡಾದ ಕೇಂದ್ರೀಯ ವಿದ್ಯಾಲಯದ ಪ್ರಶ್ನೆ ಪತ್ರಿಕೆ

Lingaraj Badiger

ಚೆನ್ನೈ: ತಮಿಳುನಾಡಿನ ಕೇಂದ್ರೀಯ ವಿದ್ಯಾಲಯದ 6ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾದ ಜಾತಿ ಮತ್ತು ಧರ್ಮದ ಕುರಿತ ವಿವಾದಾತ್ಮಕ ಪ್ರಶ್ನೆಗೆ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಶ್ನೆಪತ್ರಿಕೆಯಲ್ಲಿ ಕೇಳಲಾಗಿರುವ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಮ್ಮ ಪ್ರಕಾರ ದಲಿತರು ಎಂದರೆ ಯಾರು? ಎಂಬ ಪ್ರಶ್ನೆಗೆ ನಾಲ್ಕು ಉತ್ತರಗಳನ್ನು ನೀಡಲಾಗಿದೆ. ಅದರಲ್ಲಿ (ಎ) ವಿದೇಶಿಗರು, (ಬಿ)ಅಸ್ಪೃಶ್ಯರು, (ಸಿ)ಮಧ್ಯಮ ವರ್ಗದವರು (ಡಿ)ಮೇಲ್ವರ್ಗ ಎಂಬ ಆಯ್ಕೆಗಳನ್ನು ನೀಡಲಾಗಿದೆ. ಅಲ್ಲದೆ ಮುಸ್ಲಿಮರ ಬಗೆಗಿನ ಸಾಮಾನ್ಯ ಕಲ್ಪನೆ ಏನು? ಎಂಬ ಪ್ರಶ್ನೆಯನ್ನು ಕೇಳಲಾಗಿದ್ದು, ಅದಕ್ಕೆ (ಎ)ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸದಿರುವವರು (ಬಿ)ಶುದ್ಧ ಸಸ್ಯಾಹಾರಿಗಳು (ಸಿ)ರೋಜಾ ಸಮಯದಲ್ಲಿ ನಿದ್ದೆ ಮಾಡದವರು, (ಡಿ) ಮೇಲಿನ ಎಲ್ಲವೂ ಸರಿ ಎಂಬ ಉತ್ತರಗಳನ್ನು ನೀಡಲಾಗಿದೆ.

ಕೇಂದ್ರೀಯ  ವಿದ್ಯಾಲಯದ ಈ ಎರಡು ಪ್ರಶ್ನೆಗಳು ವಿವಾದದ ಕಿಡಿ ಹೊತ್ತಿಸಿದ್ದು, ಪ್ರಶ್ನೆ ಪತ್ರಿಕೆಯಲ್ಲಿ ಜಾತಿ ತಾರತಮ್ಯ ಮತ್ತು ಸಮುದಾಯವನ್ನು ಇಬ್ಭಾಗ ಮಾಡುವಂತೆ ಪ್ರಶ್ನೆ ಕೇಳಿರುವುದು ನನಗೆ ಅಚ್ಚರಿ ಮತ್ತು ದಿಗಿಲು ಮೂಡಿಸಿದೆ. ಈ ಪ್ರಶ್ನೆಪತ್ರಿಕೆ ತಯಾರಿಸಿದವರ ಮೇಲೆ ಕಾನೂನುರಿತ್ಯಾ ಕ್ರಮ ಜರುಗಿಸಲೇಬೇಕು ಎಂದು ಆಗ್ರಹಿಸಿ ಸ್ಟಾಲಿನ್​ ಅವರು ಟ್ವೀಟ್ ಮಾಡಿದ್ದಾರೆ.

ದೇಶದ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಕೇಳಲಾದ ಕೆಲ ಪ್ರಶ್ನೆಗಳನ್ನು ಸ್ಟಾಲಿನ್​ ಗುರುತು ಮಾಡಿ, ಪತ್ರಿಕೆಯ ಫೋಟೋಕಾಪಿಯನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಕೇಂದ್ರೀಯ ವಿದ್ಯಾಲಯದ ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ  'ವೈವಿಧ್ಯತೆ ಮತ್ತು ತಾರತಮ್ಮ' ಎಂಬ ಎರಡನೇ ಅಧ್ಯಾಯ ಮೇಲೆ ಈ ಪ್ರಶ್ನೆಯನ್ನು ಕೇಳಲಾಗಿದೆ ಎನ್ನಲಾಗಿದೆ.

SCROLL FOR NEXT