ದೇಶ

ಭಾರತೀಯ ಸೇನಾ ಕ್ಯಾಂಪ್ ಗಳ ಮೇಲೆ ವಿಧ್ವಂಸಕ ದಾಳಿಗೆ ಪಾಕಿಸ್ತಾನದ 4 ಉಗ್ರರಿಂದ ಸಂಚು: ಗುಪ್ತಚರ ವರದಿ

Srinivasamurthy VN

ಶ್ರೀನಗರ: ಭಾರತೀಯ ಸೇನಾ ಕ್ಯಾಂಪ್ ಗಳ ಮೇಲೆ ವಿಧ್ವಂಸಕ ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯ ನಾಲ್ಕು ಉಗ್ರರು ಗಡಿಯಲ್ಲಿ ಹೊಂಚು ಹಾಕಿ ಕುಳಿತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಮೂಲಗಳ ಪ್ರಕಾರ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಭಾರತದ ಗಡಿಯೊಳಗೆ ನುಸುಳಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ (LeT)ದ ನಾಲ್ಕು ಉಗ್ರರು ಹೊಂಚು ಹಾಕಿ ಕುಳಿತಿದ್ದು, ಶೋಪಿಯಾನ್ ಗಡಿಯಲ್ಲಿ ಭಾರತದೊಳಗೆ ಒಳನುಸುಳಲು ಕಾದು ಕುಳಿತಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಗುಪ್ತಚರ ಇಲಾಖೆ ವರದಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಭಾರತೀಯ ಸೇನೆ ಮತ್ತು ಇತರ ಭದ್ರತಾ ಪಡೆಗಳ ಶಿಬಿರಗಳ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದು, ಸಾಂಬಾ ಜಿಲ್ಲೆಯ ಬರಿ ಬ್ರಾಹ್ಮಣ ಶಿಬಿರ ಮತ್ತು ಜಮ್ಮು ಪ್ರದೇಶದ ಸುಂಜವಾನ್ ಮತ್ತು ಕಲ್ಚುಕ್ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಶೋಪಿಯಾನ್ ಪ್ರದೇಶದ ಮೂಲಕ ಒಳನುಸುಳಿ, ನಂತರ ಜಮ್ಮು ತಲುಪಲು ಭಯೋತ್ಪಾದಕರು ಯೋಜಿಸುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಕಳೆದ ವಾರವಷ್ಟೇ 50 ಉಗ್ರರು ಭಾರತದ ಒಳನುಸುಳಲು ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಕಾಯುತ್ತಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿ ವರದಿ ಮಾಡಿತ್ತು. ಅಲ್ಲದೆ ಇದೇ ವಿಚಾರವನ್ನು ಗುಲ್ಮಾರ್ಗ್‌ ನಲ್ಲಿ ಬಂಧಿಸಲ್ಪಟ್ಟ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಬಹಿರಂಗಪಡಿಸಿದ್ದರು. ಅಲ್ಲದೆ ತಮಗೆ ಪಾಕಿಸ್ತಾನ ಸೇನೆ ಮತ್ತು ಪಾಕ್ ಗುಪ್ತಚರ ಸಂಸ್ಥೆ ಐಎಸ್ ಐ ಆರ್ಥಿಕ ಮತ್ತು ಬಾಹ್ಯ ನೆರವು ನೀಡುತ್ತಿದೆ ಎಂಬ ಸ್ಫೋಟಕ ಮಾಹಿತಿ ಹೊರ ಹಾಕಿದ್ದರು. 

SCROLL FOR NEXT