ದೇಶ

ಗಡಿಯಲ್ಲಿ ಭಾರತ-ಚೀನಾ ಸಂಘರ್ಷ: ಮಾತುಕತೆ ಮೂಲಕ ಪರಿಹಾರಗೊಂಡಿದೆ ಎಂದ ವಿದೇಶಾಂಗ ಸಚಿವಾಲಯ

Manjula VN

ನವದೆಹಲಿ: ಜಮ್ಮು-ಕಾಶ್ಮೀರದ ಲಡಾಖ್'ನ ಪ್ಯಾಂಗಾಂಗ್ ಸರೋವರದ ಬಳಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಏರ್ಪಟ್ಟಿದ್ದ ಸಂಘರ್ಷವನ್ನು ಮಾತುಕತೆ ಮೂಲಕ ಪರಿಹರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿದೆ. 

ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು, ಉಭಯ ರಾಷ್ಟ್ರಗಳ ನಡುವೆ ಏರ್ಪಟ್ಟಿದ್ದ ಸಂಘರ್ಷವನ್ನು ಮಾತುಕತೆ ಮೂಲಕ ಪರಿಹರಿಸಲಾಗಿದೆ. ಸಂಘರ್ಷ ಪರಿಹಾರಗೊಂಡಿರುವುದಕ್ಕೂ ಮುಖ್ಯವಾದ ವಿಚಾರವೆಂದರೆ, ಸಮಸ್ಯೆ ಅತ್ಯಂತ ವೇಗವಾಗಿ ಪರಿಹಾರಗೊಂಡಿದೆ. ಭಾರತ ಹಾಗೂ ಚೀನಾ ನಡುವಿನ ಯಾವುದೇ ವಿಚಾರಗಳೇ ಆದರೂ ಅದನ್ನು ಪರಿಹಾರಿಸಲು ಕಾರ್ಯವಿಧಾನಗಳು ಅಸ್ತಿತ್ವದಲ್ಲಿದೆ ಎಂದು ಹೇಳಿದ್ದಾರೆ. 

ಅತ್ಯಂತ ವೇಗಗ ಗತಿಯಲ್ಲಿ ಸಮಸ್ಯೆ ಪರಿಹಾರಗೊಂಡಿದೆ. ಇದರ ಅರ್ಥ ಭಾರತ ಹಾಗೂ ಚೀನಾ ನಡುವೆ ಅಸ್ತಿತ್ವದಲ್ಲಿರುವ ಕಾರ್ಯ ವಿಧಾನಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಾಗಿದೆ ಎಂದು ತಿಳಿಸಿದ್ದಾರೆ. 

ಪ್ಯಾಂಗಾಂಗ್ ಸರೋವರದ ಬಳಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಬುಧವಾರ ಸಂಘರ್ಷ ಏರ್ಪಟ್ಟಿದ್ದು. ಈ ವೇಳೆ ಹಿರಿಯ ಅಧಿಕಾರಿಗಳ ಮಾತುಕತೆ ಬಳಿಕ ಪರಿಸ್ಥಿತಿ ತಿಳಿಯಾಗಿತ್ತು ಎಂದು ವರದಿಗಳು ತಿಳಿಸಿದ್ದವು. 

ಪ್ಯಾಂಗಾಂಗ್'ನ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆ ಗಸ್ತು ತಿರುಗುತ್ತಿದ್ದ ವೇಳೆ ಚೀನಾ ಸೈನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಭಾರತೀಯ ಸೈನಿಕರು ಚೀನಾ ಯೋಧರಿಗೆ ತಿರುಗೇಟು ನೀಡಿದ್ದರು. ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ವಾಕ್ಸಮರ ಹೆಚ್ಚಾದ ಹಿನ್ನಲೆಯಲ್ಲಿ ಉಭಯ ಸೇನೆಗಳು ಹೆಚ್ಚುವರಿ ಸೈನಿಕರನ್ನು ಗಡಿಗೆ ಕರೆಸಿಕೊಂಡಿದ್ದವು. ಬಳಿಕ ಇತ್ತಂಡಗಳ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿ, ಸಮಸ್ಯೆ ಬಗೆಹರಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿದ್ದವು. 

SCROLL FOR NEXT