ದೇಶ

ಮೇಲ್ಜಾತಿ ಯುವತಿಯೊಂದಿಗೆ ಸಂಬಂಧ: ಜೀವಂತವಾಗಿ ಸುಟ್ಟುಹೋದ ದಲಿತ ಯುವಕ

Nagaraja AB

ಹಾರ್ಡೊಯ್: ಮೇಲ್ಜಾತಿಯ ಯುವತಿಯೊಂದಿಗೆ ಸಂಬಂಧ ಹೊಂದಿದ್ದ  20 ವರ್ಷದ ದಲಿತ ಯುವಕನೋರ್ವನನ್ನು ಆಕೆಯ ಸಂಬಂಧಿಕರು ಜೀವಂತವಾಗಿ  ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಆಘಾತದಿಂದ ಆತನ ತಾಯಿಯೂ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. 

ಹಾರ್ಡೊಯ್ ಜಿಲ್ಲೆಯ ಬಾದೆಶಾ ಪ್ರದೇಶದಲ್ಲಿ ಶನಿವಾರ ಮಾರ್ಯಾದೆ ಹತ್ಯೆ ಪ್ರಕರಣ  ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ದಲಿತ ವ್ಯಕ್ತಿ ಅಭಿಷೇಕ್ ಆಲಿಯಾಸ್ ಮೊನು ಎಂಬಾತನನ್ನು ಚೆನ್ನಾಗಿ ಥಳಿಸಿ, ಮನೆಯೊಂದರಲ್ಲಿ ಕೂಡಿ ಹಾಕಿ ನಂತರ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಅಲೋಕ್ ಪ್ರಿಯದರ್ಶಿನಿ ಹೇಳಿದ್ದಾರೆ.

ಆತನ ಆಕ್ರಂದನ ಕೇಳಿ ಸ್ಥಳಕ್ಕೆ  ಆಗಮಿಸಿದ ಸ್ಥಳೀಯರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಲಖನೌ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ತೀವ್ರ ಗಾಯವಾಗಿ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಎಸ್ ಪಿ ಹೇಳಿದ್ದಾರೆ. ಈ ಆಘಾತದ ಸುದ್ದಿ ಕೇಳಿ ಆತನ ತಾಯಿಯೂ ಕೂಡಾ ಮೃತಪಟ್ಟಿದ್ದಾರೆ ಎಂದು ಮೊನು ಸಂಬಂಧಿಕರು ತಿಳಿಸಿದ್ದಾರೆ.

ಮೊನು ಮೇಲ್ಜಾತಿಯ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ಆಕೆಯನ್ನು ನೋಡಲು ಹೋದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊನು ತನ್ನ ಅನಾರೋಗ್ಯಪೀಡಿತ ತಾಯಿಯ ಚಿಕಿತ್ಸೆಗಾಗಿ 25 ಸಾವಿರ ರೂ. ಹೊಂದಿಸಿ ಬರುತ್ತಿರುವಾಗ ಅಡ್ಡಗಟ್ಟಿದ್ದ ಯುವತಿಯ ಸಂಬಂಧಿಕರು ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ನಂತರ ಹಣವನ್ನು ಕಸಿದುಕೊಂಡು ಮನೆಯೊಂದರಲ್ಲಿ ಕೂಡಿಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಮೃತನ ಸಂಬಂಧಿ ರಾಜು ಹೇಳಿದ್ದಾರೆ.

ಈ ಪ್ರಕರಣ ಸಂಬಂಧ ಯುವತಿಯ ಇಬ್ಬರು ಸಂಬಂಧಿಕರು ಸೇರಿದಂತೆ ಐವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

SCROLL FOR NEXT