ದೇಶ

ನವರಾತ್ರಿ ಆರಂಭ: ದುರ್ಗೆ ಆರಾಧನೆಗೆ ಸಜ್ಜಾದ ದೇಶ, ಬೆಳಿಗ್ಗೆಯಿಂದಲೇ ದೇಗುಲಕ್ಕೆ ತೆರಳುತ್ತಿರುವ ಜನತೆ

Manjula VN

ನವದೆಹಲಿ: ನವರಾತ್ರಿ ಭಾನುವಾರದಿಂದ ಆರಂಭವಾಗಿದ್ದು, ನವರೂಪದಲ್ಲಿನ ವಿವಿಧ ಶಕ್ತಿ ದೇವಿಯ ಆರಾಧನೆಗೆ ಇಡೀ ದೇಶ ಸಜ್ಜಾಗಿದೆ. ನವರಾತ್ರಿಯ ಮೊದಲ ದಿನವಾದ ಇಂದು ಬೆಳಿಗ್ಗೆಯಿಂದಲೇ ದೇಶದ ಮೂಲೆಮೂಲೆಗಳಲ್ಲಿರುವ ಜನತೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. 

ನವರುರ್ಗಿಯರ ಪ್ರಸಿದ್ಧ ನವ ದೇಗುಲಗಳಾದ ಮುಂಬೈ, ಮಹಾರಾಷ್ಟ್ರದಲ್ಲಿರುವ ಹೆಡ್ಡಾವ್ದೆ ಮಹಾಲಕ್ಷ್ಮೀ ದೇಗುಲ, ಉತ್ತರಪ್ರದೇಶ ವಾರಣಾಸಿಯಲ್ಲಿರುವ ಬ್ರಹ್ಮಚಾರಿಣಿ ದೇವಿ ದೇವಸ್ಥಾನ, ಚಂದ್ರಘಂಟಾ ದೇವಿ ದೇಗುಲ, ಕಾಲ್ಪುರ ನಗರದ ಜಿಲ್ಲೆಯೊಂದರಲ್ಲಿರುವ ಕೂಷ್ಮಾಂಡಾ ದೇವಿ ದೇಗುಲ, ಮೈಸೂರಿನಲ್ಲಿರುವ ಚಾಂಮುಡೇಶ್ವರಿ ದೇಗುಲ, ವಾರಣಾಸಿಯ ಸ್ಕಂದಮಾತಾ ದೇವಿ ದೇಗುಲ, ವಾರಣಾಸಿಯ ಕಾಲರಾತ್ರಿ ದೇವಿ ದೇಗುಲ, ಲುಧಿಯಾನಾದಲ್ಲಿರುವ ಮಹಾಗೌರಿ ದೇವಸ್ಥಾನ ಹಾಗೂ ಮಧ್ಯಪ್ರದೇಶದ ಸಾಗರದಲ್ಲಿರುವ ಸಿದ್ಧಿಧಾತ್ರಿ ದೇವಿಡಿ ದೇಗುಲಗಳಲ್ಲಿ ಈಗಾಗಲೇ ಜನರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. 

ಇನ್ನು ದೆಹಲಿಯಲ್ಲಿರುವ ಕಲ್ಕಾಜಿ ದೇಗುಲ ಹಾಗೂ ಜಂಡೆವಾಲನ್ ದೇಗುಲದಲ್ಲಿ ವಿಶೇಷ ಅಲಂಕಾರವನ್ನು ಮಾಡಲಾಗಿದ್ದು, ಬೆಳಿಗ್ಗೆಯಿಂದಲೇ ದೇಗುಲಕ್ಕೆ ಭೇಟಿ ನೀಡುತ್ತಿರುವ ಜನರು, ದರ್ಶನ ಪಡೆಯುತ್ತಿದ್ದಾರೆ. 

ಪ್ರಸಕ್ತ ಸಾಲಿನಲ್ಲಿ ನವರಾತ್ರಿಯನ್ನು ಸೆ.29ರಿಂದ ಅಕ್ಟೋಬರ್ 7ರವರೆಗೂ ಆಚರಿಸಲಾಗುತ್ತಿದೆ. ನವರೂದಲ್ಲಿನ ವಿವಿಧ ಶಕ್ತಿ ದೇವಿಯ ಆರಾಧನೆಯೇ ನವರಾತ್ರಿಯಾಗಿದೆ. ಶಕ್ತಿ ಸ್ವರೂಪಣಿಯಾದ ದುರ್ಗೆ ದುಷ್ಟ ಸಂಹಾರಕ್ಕಾಗಿ ಈ ಸಮಯದಲ್ಲಿ 9 ಅವತಾರಗಳನ್ನು ತಾಳುತ್ತಾಳೆ. ಅಧರ್ಮ ಅಳಿಸಿ ಧರ್ಮ ಸೃಷ್ಟಿಸುವ ದುರ್ಗೆ, ಕಡೆಯ ದಿನ ಶಾಂತ ಸ್ವರೂಪಳಾಗುತ್ತಾಳೆ. ದೇಶದೆಲ್ಲೆಡೆ ಒಂಬತ್ತು ದಿನಗಳ ಕಾಲ ದುರ್ಗೆಯ ಶಕ್ತಿ ಪೂಜೆ ನಡೆಯುತ್ತದೆ. ಅದರಲ್ಲಿಯೂ ಕರ್ನಾಟಕದ ದುರ್ಗೆಯನ್ನು ಚಾಮುಂಡೇಶ್ವರಿ ಸ್ವರೂಪದಲ್ಲಿ ದಸರಾ ಸಂಭ್ರಮವಾಗಿ ಆಚರಿಸಲಾಗುತ್ತದೆ. 

ಮೈಸೂರಿನ ನವರಾತ್ರಿ ದಸರಾ ಸಂಭ್ರಮ ವಿಶ್ವವಿಖ್ಯಾತವಾಗಿದ್ದು, ವಿಜಯ ದಶಮಿಯಂದು ನಡೆಯುವ ಜಂಬೂ ಸಾವರಿಯನ್ನು ನೋಡಲು ದೇಶ ಹಾಗೂ ವಿದೇಶದಿಂದ ಜನರು ಆಗಮಿಸುತ್ತಾರೆ. 

SCROLL FOR NEXT