ದೇಶ

ಕೊವಿಡ್-19: ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿ ಬಲಿ, ದೇಶದಲ್ಲಿ ಸಾವಿನ ಸಂಖ್ಯೆ 56ಕ್ಕೆ ಏರಿಕೆ

Lingaraj Badiger

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಉತ್ತರ ಪ್ರದೇಶದಲ್ಲಿ ಕೊವಿಡ್ -19ಕ್ಕೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಹಾಗೂ ದೇಶಾದ್ಯಂತ 56ಕ್ಕೆ ಏರಿಕೆಯಾಗಿದೆ.

ಉತ್ತರ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಮೃತಪಟ್ಟ 25 ವರ್ಷದ ಯುವಕ ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ಇಂದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಮೀರತ್ ನಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ. ಮಾರ್ಚ್ 29ರಂದು ಈ ವ್ಯಕ್ತಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿತ್ತು. 

ಭಾರತದಲ್ಲಿ ಇದುವರೆಗೆ 1700ಕ್ಕೂ ಅಧಿಕ ಕೊರೋನಾ ಸೋಂಕಿತ ಕೇಸುಗಳು ವರದಿಯಾಗಿದ್ದು, ಮಧ್ಯ ಪ್ರದೇಶ, ತಮಿಳುನಾಡು, ಪಾಂಡಿಚೆರಿ ಮತ್ತು ತೆಲಂಗಾಣಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಆಂಧ್ರ ಪ್ರದೇಶದಲ್ಲಿ 43 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕೇಂದ್ರ ಆರೋಗ್ಯ ಸಚಿವಾಲಯ ದೇಶದ 16 ಸ್ಥಳಗಳನ್ನು ಕೊರೋನಾ ಹಾಟ್ ಸ್ಪಾಟ್ ಎಂದು ಗುರುತಿಸಿದೆ. ಅವುಗಳಲ್ಲಿ ದಿಲ್ಶಾದ್ ಗಾರ್ಡನ್ ಮತ್ತು ದೆಹಲಿಯ ನಿಜಾಮುದ್ದೀನ್, ಪಠಣಮ್ ಥಿಟ್ಟಾ ಮತ್ತು ಕೇರಳದ ಕಾಸರಗೋಡು, ಉತ್ತರ ಪ್ರದೇಶದ ನೊಯ್ಡಾ, ಮೀರತ್, ರಾಜಸ್ತಾನದ ಬಿಲ್ವಾರಾ, ಜೈಪುರ್, ಮಹಾರಾಷ್ಟ್ರದ ಮುಂಬೈ, ಪುಣೆ, ಗುಜರಾತ್ ನ ಅಹಮದಾಬಾದ್, ಮಧ್ಯ ಪ್ರದೇಶದ ಇಂದೋರ್, ಪಂಜಾಬ್ ನ ನವಂಶಾರ್, ಕರ್ನಾಟಕದ ಬೆಂಗಳೂರು, ತಮಿಳು ನಾಡಿನ ಇರೋಡ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿವೆ.

SCROLL FOR NEXT