ದೇಶ

ದೀಪ ಹಚ್ಚುವ ಭರದಲ್ಲಿ ಸಾಮಾಜಿಕ ಅಂತರ ಎಂಬ ಲಕ್ಷ್ಮಣ ರೇಖೆ ದಾಟದಿರಿ: ಜನತೆಗೆ ಪ್ರಧಾನಿ ಮೋದಿ ಮನವಿ

Manjula VN

ನವದೆಹಲಿ: ಕೊರೋನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ದೀಪ ಹಚ್ಚುವ ಭರದಲ್ಲಿ ಸಾಮಾಜಿಕ ಅಂತರ ಎಂಬ ಲಕ್ಷ್ಮಣ ರೇಖೆಯನ್ನು ದಾಟದಿರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆ ಬಳಿ ಮನಿ ಮಾಡಿಕೊಂಡಿದ್ದಾರೆ. 

ಲಾಕ್ ಡೌನ್ ಜಾರಿಯಾಗಿ ಇಂದಿಗೆ 10 ದಿನಗಳಾಗಿವೆ. ಕಳೆದ ಮಾರ್ಚ್ 22 ರಂದು ಜನತಾ ಕರ್ಫ್ಯೂಗೆ ಕರೆ ನೀಡಲಾಗಿತ್ತು. ಇದನ್ನು ದೇಶದ ಜನತೆ ಯಶಸ್ವಿಯೂಗೊಳಿಸಿದ್ದು, ಇದನ್ನು ಈಗ ವಿಶ್ವವೇ ಅನುಸರಿಸಿತ್ತು.

ಮಾರ್ಚ್ 22 ರಂದು ಕರ್ಫ್ಯೂ ಅಂತ್ಯಗೊಂಡ ಬಳಿಕ ಮೋದಿಯವರು ಸಂಜೆ 5 ಗಂಟೆ ವೇಳೆ ಕೊರೋನಾ ವಿರುದ್ಧ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಪೊಲೀಸರು ಹಾಗೂ ಮಾಧ್ಯಮದವರಿಗೆ ಚಪ್ಪಾಳೆ ತಟ್ಟುವ ಮೂಲಕ ಪ್ರಶಂಸಿಸೋಣ ಎಂದು ಹೇಳಿದ್ದರು. ಈ ವೇಳೆ ಸಾಮಾಜಿಕ ಅಂತರ ಮರೆತ ಜನರು ಬೀದಿ ಬೀದಿಗಳಲ್ಲಿ ಗುಂಪು ಗೂಡಿ ಶಂಕು ಊದಿ, ಜಾಗಟೆ ಬಾರಿಸಿದ್ದರು. ಇದಕ್ಕೆ ಹಲವು ಟೀಕೆಗಳೂ ಕೂಡ ವ್ಯಕ್ತವಾಗಿತ್ತು. 

ಈ ಬೆಳವಣಿಗೆ ಬಳಿಕ ಜನರು ಸಾಮಾಜಿಕ ಅಂತರ ಮರೆತು, ಲಾಕ್ ಡೌನ್ ಉಲ್ಲಂಘಿಸುತ್ತಿದ್ದಾರೆಂದು ಸ್ವತಃ ಮೋದಿಯವರೇ ಬೇಸರ ವ್ಯಕ್ತಪಡಿಸಿದ್ದರು. 

ಇದರಂತೆ ಇಂದು ಜನತೆಯೊಂದಿಗೆ ವಿಡಿಯೋ ಸಂದೇಶ ಹಂಚಿಕೊಂಡಿರುವ ಮೋದಿಯವರು, ಇದೆ 5 ರಂದು ರಾತ್ರಿ 9 ಗಂಟೆಗೆ ಸರಿಯಾಗಿ ದೇಶದ ಜನತೆ ಮನೆಯಲ್ಲಿನ ಲೈಟ್ ಗಳನ್ನು ಆರಿಸಿ, 9 ನಿಮಿಷಗಳ ಕಾಲ ದೀಪ, ಮೊಂಬತ್ತಿ ಹಚ್ಚಿ, ಎಲ್ಲರೂ ಅಂಧಕಾರ, ಮಹಾಮಾರಿ ಕರೋನ ತೊಲಗಿಸಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಏಪ್ರಿಲ್ 5 ರಂದು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಹಾಗೂ ಸಾಮಾಜಿಕ ಅಂತರ ಎಂಬ ಲಕ್ಷ್ಮಣ ರೇಖೆಯನ್ನು ದಾಟದಂತೆ ಜನತೆಗೆ ಸೂಚನೆ ನೀಡಿದ್ದಾರೆ. 

ವೈರಸ್ ಇರುವ ಸಂದರ್ಭದಲ್ಲಿ ನಾವೆಲ್ಲರೂ ಮನೆಗಳಲ್ಲಿ ಬಂಧಿಯಾಗಬೇಕು. ದೀಪ ಬೆಳಗಿಸಲು ಯಾರೊಬ್ಬರೂ ರಸ್ತೆಗಿಳಿಯಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಸಾಮಾಜಿಕ ಅಂತರವನ್ನೂ ಯಾರೂ ಮುರಿಯಬಾರದು. ಕೊರೋನಾ ಸರಪಳಿ ಮುರಿಯಲು ಸಾಮಾಜಿಕ ಅಂತರ ರಾಮಬಾಣವಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ. 

SCROLL FOR NEXT