ದೇಶ

ಮಾನವಿಯತೆಯನ್ನು ಮರೆಸಿದ ಕೊರೋನಾ: ಎಲ್ಲರೂ ಇದ್ದು ಸಾವಿನಲ್ಲಿ ಅನಾಥರಾದ ಪಂಜಾಬ್ ನ ಇಬ್ಬರು ಜನ! 

Srinivas Rao BV

ಅಮೃತ್ ಸರ: ಕೊರೋನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸುತ್ತಿದ್ದು, ಆರ್ಥಿಕತೆ, ಉದ್ಯೋಗಗಳಿಗಷ್ಟೇ ಅಲ್ಲದೇ ಮಾನವಿಯತೆಗೇ ಕಂಟಕವಾಗಿ ಪರಿಣಮಿಸಿದೆ. 

ಕುಟುಂಬ ಸದಸ್ಯರೆಲ್ಲರೂ ಜೀವಂತವಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪುವವರು ಅನಾಥರಾಗಿಯೇ ಇಹಲೋಕ ತ್ಯಜಿಸುವ ಇಟಾಲಿ ವರದಿಗಳನ್ನು ನೋಡಿರುತ್ತೀರಿ. ಆದರೆ ಭಾರತದ ಪಂಜಾಬ್ ನಲ್ಲಿಯೂ ಈ ರೀತಿಯ ಮನಕಲಕುವ ಘಟನೆಗಳು ವರದಿಯಾಗತೊಡಗಿವೆ. 

ಅಮೃತ್ ಸರದಲ್ಲಿ ಕೊರೋನಾ ಸೋಂಕಿತ, 69 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆದರೆ ಕುಟುಂಬ ಸದಸ್ಯರು ಮಾತ್ರ ಪಾರ್ಥಿವ ಶರೀರ ತೆಗೆದುಕೊಂಡು ಹೋಗುವುದಕ್ಕಾಗಲೀ, ಅಂತ್ಯಸಂಸ್ಕಾರಕ್ಕಾಗಲೀ ಮುಂದೆ ಬಾರದೇ ದೂರ ಉಳಿದಿದ್ದಾರೆ. ಪರಿಣಾಮ ಜಿಲ್ಲಾಡಳಿತವೇ ಮೃತರ ಅಂತ್ಯಕ್ರಿಯೆಯನ್ನು ನಡೆಸಿದೆ. ಇದಕ್ಕೂ ಮುನ್ನ ಲೂಧಿಯಾನದಲ್ಲಿ ಏ.06 ರಂದು ಮೃತಪಟ್ಟಿದ್ದ ಕೊರೋನಾ ಸೋಂಕಿತ ಮಹಿಳೆಗೂ ಇದೇ ಗತಿ ಬಂದೊದಗಿತ್ತು. ಕುಟುಂಬ ಸದಸ್ಯರು ಪಾರ್ಥಿವ ಶರೀರ ಸ್ವೀಕರಿಸಲು ನಿರಾಕರಿಸಿದ ಪರಿಣಾಮ ಜಿಲ್ಲಾಡಳಿತವೇ ಅಂತ್ಯಸಂಸ್ಕಾರ ಮಾಡಿತ್ತು. 

ಏ.07 ರಂದು ಮೃತಪಟ್ಟ 69 ವರ್ಷದ ಪುರುಷ ನಿವೃತ್ತ ಅಧೀಕ್ಷಕ ಎಂಜಿನಿಯರ್ ಆಗಿದ್ದರು. ಸಾವಿನ ಸುದ್ದಿ ತಿಳಿದೂ ಸಹ ಕುಟುಂಬ ಸದಸ್ಯರು ಪಾರ್ಥಿವ ಸ್ವೀಕರಿಸಲು ನಿರಾಕರಿಸಿದರು. ಮೃತರ ಪುತ್ರಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದು, ಅಂತ್ಯಸಂಸ್ಕಾರದ ಸಮಯದಲ್ಲೂ ಯಾರೊಬ್ಬರೂ ಆ ಸ್ಥಳಕ್ಕೆ ಆಗಮಿಸಿರಲಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 

ಪಂಜಾಬ್ ನ ವೆರ್ಕಾ ಗ್ರಾಮದಲ್ಲಿ ಇಂಥಹದ್ದೇ ಮತ್ತೊಂದು ಘಟನೆ ನಡೆದಿದ್ದು, ಸ್ವರ್ಣಮಂದಿರದಲ್ಲಿ ಸಕ್ರಿಯರಾಗಿದ್ದ, ಕೊರೋನಾ ಸೋಂಕಿತ ಮೃತರ ಅಂತ್ಯಕ್ರಿಯೆಯನ್ನು ಊರಿನಲ್ಲಿ ನಡೆಸಲು ಅವಕಾಶ ನೀಡಲು ನಿರಾಕರಿಸಿದ್ದಾರೆ.

SCROLL FOR NEXT