ಲಖನೌ: ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಲ್ಲಾಹಾಬಾದ್ ಯೂನಿವರ್ಸಿಟಿ ಪ್ರೊಫೆಸರ್ ವಿರುದ್ಧ ಪ್ರಯಾಗ್ ರಾಜ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಳೆದ ತಿಂಗಳು ನವದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲಿಘಿ ಕಾರ್ಯಕ್ರಮದಲ್ಲಿ ಪ್ರೊಫೆಸರ್ ಮೊಹಮ್ಮದ್ ಶಾಹಿದ್ ಭಾಗಿಯಾಗಿದ್ದರು. ಈತನ ಪತ್ನಿ ಹಾಗೂ ಕುಟುಂಬ ಸದಸ್ಯರನ್ನು ಜಿಲ್ಲಾಡಳಿತ ಈಗ ಕ್ವಾರಂಟೈನ್ ನಲ್ಲಿರಿಸಿದೆ.
ಮಾ.13 ರಂದು ತಬ್ಲಿಘಿ ಜಮಾತ್ ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೊಹಮ್ಮದ್ ಶಾಹಿದ್ ಅದನ್ನು ಜಿಲ್ಲಾಡಳಿತಕ್ಕೆ ತಿಳಿಸದೇ ಮರೆಮಾಚಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ, ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ನಂತರ ಮೆಹಬೂಬ್ ಗೆಸ್ಟ್ ಹೌಸ್ ಗೆ ಆತನನ್ನು ಹಾಗೂ ಕುಟುಂಬ ಸದಸ್ಯರನ್ನು ಕರೆದೊಯ್ದು ಐಸೊಲೇಷನ್ ನಲ್ಲಿಟ್ಟಿದ್ದಾರೆ.
ಪೊಲೀಸರಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಪ್ರೊಫೆಸರ್ ಶಾಹಿದ್ ತಬ್ಲಿಘಿ ಕಾರ್ಯಕ್ರಮದಿಂದ ವಾಪಸ್ಸಾದ ಬಳಿಕ ಮಾ.17-18 ರಂದು ವಿಶ್ವವಿದ್ಯಾಲಯದ ಪರೀಕ್ಷಾ ಕೆಲಸಗಳನ್ನು ನಿರ್ವಹಿಸಿದ್ದರು. ಮಾಹಿತಿ ಮರೆಮಾಚಿದ್ದ ಪ್ರೊಫೆಸರ್ ವಿರುದ್ಧ ವಿಶ್ವವಿದ್ಯಾಲಯವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.