ದೇಶ

ಅಯೋಧ್ಯೆ ಶಿಲಾನ್ಯಾಸ ಕಾರ್ಯಕ್ರಮದಿಂದ ದೂರ ಉಳಿಯುತ್ತೇನೆ: ಅಚ್ಚರಿ ಮೂಡಿಸಿದ ಉಮಾ ಭಾರತಿ

Srinivasamurthy VN

ಅಯೋಧ್ಯೆ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ್ದ ಮಧ್ಯ ಪ್ರದೇಶ ಮಾಜಿ ಸಿಎಂ ಉಮಾಭಾರತಿ ಅವರು ಇದೀಗ ಶಿಲಾನ್ಯಾಸ ಕಾರ್ಯಕ್ರಮದಿಂದ ದೂರ ಉಳಿಯುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹೌದು.. ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಉಮಾ ಭಾರತಿ ಅವರಿಗೆ ಆಹ್ವಾನವಿದೆ. ಆದರೂ ತಾವು ಕಾರ್ಯಕ್ರಮದಿಂದ ದೂರು ಉಳಿಯಲು ನಿರ್ಧರಿಸಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿದ್ಯುಕ್ತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಇಂತಹ ಪ್ರಮುಖ ಕಾರ್ಯಕ್ರಮದಿಂದಲೇ  ಉಮಾಭಾರತಿ ದೂರ ಉಳಿಯಲು ನಿರ್ಧರಿಸಿದ್ದಾರೆ.

ಉಮಾ ಭಾರತಿ ನಿರ್ಧಾರಕ್ಕೆ ಕೊರೋನಾ ಕಾರಣ!
ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಗೈರಾಗುವ ಉಮಾಭಾರತಿ ಅವರ ನಿರ್ಧಾರಕ್ಕೆ ಕೊರೋನಾ ವೈರಸ್ ಕಾರಣ ಎನ್ನಲಾಗಿದೆ. ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಸೇರಿದಂತೆ ಸಾವಿರಾರೂ ಹಿಂದೂಪರ ಕಾರ್ಯಕರ್ತರು  ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಕಾರ್ಯಕ್ರಮದ ಸ್ಥಳದಲ್ಲಿ ಜನಸ್ಥೋಮ ಸೇರಲಿದ್ದು, ಇದರಿಂದ ಕೊರೋನಾ ವೈರಸ್ ಪ್ರಸರಣದ ಭೀತಿ ಕೂಡ ಇದೆ. ಇದೇ ಕಾರಣಕ್ಕೆ ಉಮಾಭಾರತಿ ಅವರು ಕಾರ್ಯಕ್ರಮದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ನಾನು ಭೋಪಾಲ್ ನಿಂದ ಹೊರಟು ನಾಳೆ ಸಂಜೆ ಹೊತ್ತಿಗೆ ಅಯೋಧ್ಯೆ ಸೇರುತ್ತೇನೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ನನಗೂ ಕೂಡ ವೈರಸ್ ಸೋಂಕು ಪ್ರಸರಿಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ  ಅಹಿತಕರ ಘಟನೆಗಳು ನಡೆಯಬಾರದು. ಹೀಗಾಗಿ ನಾನು ಮನೆಯಲ್ಲೇ ಇದ್ದು ಕಾರ್ಯಕ್ರಮ ವೀಕ್ಷಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮ ಮುಗಿಸಿಕೊಂಡು ದೆಹಲಿಗೆ ಹೊರಟ ಬಳಿಕ ನಾನು ಆಯೋಧ್ಯೆಗೆ ತೆರಳುತ್ತೇನೆ. ಸರಯೂ ನದಿಯ ತಟದಲ್ಲಿ ವಿಹರಿಸುತ್ತೇನೆ ಎಂದು ಹೇಳಿದ್ದಾರೆ

SCROLL FOR NEXT