ಚಂಡೀಘಡ: 10ನೇ ತರಗತಿಯಲ್ಲಿ ಕೇವಲ 2 ಅಂಕ ಬಂದಿದೆ ಎಂದು ವಿಕಲಚೇತನ ವಿದ್ಯಾರ್ಥಿನಿಯೊಬ್ಬರು ಮರುಮೌಲ್ಯಮಾಪನಕ್ಕೆ ಹಾಕಿದಾಗ 100 ಅಂಕ ಬಂದ ವಿಚಿತ್ರ ಘಟನೆ ಹರ್ಯಾಣದಲ್ಲಿ ನಡೆದಿದೆ.
ಹರ್ಯಾಣ 10ನೇ ತರಗತಿ ಫಲಿತಾಂಶ ಮಹಾ ಎಡವಟ್ಟು ಇದೀಗ ಬಟಾ ಬಯಲಾಗಿದ್ದು, ಮೌಲ್ಯಮಾಪನ ವಿಟಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹರ್ಯಾಣದಲ್ಲಿ ಇತ್ತೀತೆಗೆ ಪ್ರಕಟಗೊಂಡ 10ನೇ ತರಗತಿ ಫಲಿತಾಂಶದಲ್ಲಿ ಸುಪ್ರಿಯಾ ಎಂಬ ವಿಕಲ ಚೇತನ ವಿದ್ಯಾರ್ಥಿನಿಗೆ ಗಣಿತ ವಿಷಯದಲ್ಲಿ ಕೇವಲ 2 ಅಂಕ ಬಂದಿತ್ತು.
ದೃಷ್ಟಿ ವಿಕಲಚೇತನರಾಗಿದ್ದ ಸುಪ್ರಿಯಾ ಇದರಿಂದ ತೀವ್ರ ಬೇಸರಗೊಂಡಿದ್ದರು. ಕೂಡಲೇ ಗಣಿತ ವಿಷಯದ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದರು. ಬಳಿಕ ಬಂದ ಫಲಿತಾಂಶದಲ್ಲಿ ಸುಪ್ರಿಯಾ 100 ಅಂಕಗಳಿಸಿದ್ದರು. ಆ ಮೂಲಕ ಹರ್ಯಾಣ 10ನೇತರಗತಿ ಮಂಡಳಿಯ ಮೌಲ್ಯಮಾಪನ ಎಡವಟ್ಟು ಬಟಾಬಯಲಾಗಿದೆ.
ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿ ಸುಪ್ರಿಯಾ ಗಣಿತ ವಿಷಯದಲ್ಲಿ ನನಗೆ ಕೇವಲ 2 ಅಂಕ ಬಂದಿತ್ತು. ನಿಜಕ್ಕೂ ಇದು ನನಗೆ ದೊಡ್ಡ ಅಘಾತವಾಗಿತ್ತು. ನನ್ನ ತಂದೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಮಾಡಿದರು. ಬಳಿಕ ಬಂದ ಫಲಿತಾಂಶದಲ್ಲಿ ನನಗೆ 100 ಅಂಕ ಬಂದಿತ್ತು. ಇದು ವಿದ್ಯಾರ್ಥಿಗಳ ಭವಿಷ್ಯದ ವಿಚಾರವಾಗಿದ್ದು, ಇದರಲ್ಲಿ ಶಿಕ್ಷಣ ಇಲಾಖೆ ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು. ಮೌಲ್ಯಮಾಪನವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸುಪ್ರಿಯಾ ಆಗ್ರಹಿಸಿದ್ದಾರೆ.
ಇದೇ ವಿಚಾರವಾಗಿ ಹರ್ಯಾಣ ಶಾಲಾ ಪರೀಕ್ಷಾ ಮಂಡಳಿ ವಿರುದ್ಧ ಕಿಡಿಕಾರಿರುವ ಸುಪ್ರೀಯಾ ಅವರ ತಂದೆ ಚಜ್ಜುರಾಮ್ ಅವರು ನನ್ನ ಪುತ್ರಿ ಎಲ್ಲ ವಿಷಗಳಲ್ಲೂ ಶೇ.90ಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದಾಳೆ. ಆದರೆ ಗಣಿತದಲ್ಲಿ ಮಾತ್ರ ಹೇಗ ಕೇವಲ 2 ಅಂಕ ಬರಲು ಸಾಧ್ಯ. ಹೀಗಾಗಿ ನಾನು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದೆ. ಈ ಪ್ರಕ್ರಿಯೆಗಾಗಿ ನಾನು 5 ಸಾವಿರ ರೂ ವ್ಯಯಿಸಿದ್ದೇನೆ. ನಾನೂ ಕೂಡ ಓರ್ವ ಗಣಿತ ಶಿಕ್ಷಕ. ನನ್ನ ಪುತ್ರಿ ಹೇಗೆ ಅಷ್ಟು ಕಡಿಮೆ ಅಂಕ ಪಡೆಯಲು ಸಾಧ್ಯ. ಶಿಕ್ಷಣ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶಾಲೆ ಪುನಾರಂಭ ಬಳಿಕ ಸುಪ್ರಿಯಾ ಗೆ ಸನ್ಮಾನ
ಇನ್ನು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ಸುಪ್ರೀಯಾರಿಗೆ ಸನ್ಮಾನ ಮಾಡಲಾಗುತ್ತದೆ ಎಂದು ಆಕೆ ಓದಿದ ಹಿಸಾರ್ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಸುಪ್ರೀಯಾ ಅತ್ಯಂತ ಬುದ್ದಿವಂತ ವಿದ್ಯಾರ್ಥಿನಿ. ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಶಿಕ್ಷಣಾಭ್ಯಾಸದಲ್ಲಿ ಆಕೆ ಅತ್ಯುತ್ತಮ ವಿದ್ಯಾರ್ಥಿನಿ. ಶಾಲೆ ಪುನಾರಂಭವಾಗುತ್ತಿದ್ದಂತೆಯೇ ಆಕೆಯನ್ನು ಸನ್ಮಾನಿಸಲಾಗುತ್ತದ ಎಂದು ಹೇಳಿದ್ದಾರೆ.
ಕಳೆದ ಜುಲೈ 10ರಂದು ಹರ್ಯಾಣ ಶಾಲಾ ಶಿಕ್ಷಣ ಮಂಡಳಿ 10ನೇ ತರಗತಿ ಪರೀಕ್ಷಾ ಫಲಿತಾಂಶ ಘೋಷಣೆ ಮಾಡಿತ್ತು.