ದೇಶ

ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು 72 ಗಂಟೆಗಳಲ್ಲಿ ಪರೀಕ್ಷೆಗೊಳಪಡಿಸಬೇಕು: ಪ್ರಧಾನಿ ಮೋದಿ

Srinivasamurthy VN

ನವದೆಹಲಿ: ಕೊರೋನಾ ವೈರಸ್ ಸೋಂಕಿತನ ಸಂಪರ್ಕಕ್ಕೆ ಬಂದವರನ್ನು 72 ಗಂಟೆಗಳಲ್ಲಿ ಪರೀಕ್ಷೆಗೊಳಪಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶದಲ್ಲಿರುವ ಕೋವಿಡ್‌ 19 ಸೋಂಕಿನ ಸ್ಥಿತಿಗತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹತ್ತು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸುತ್ತಿದ್ದಾರೆ. ಈ ವೇಳೆ ಎಲ್ಲ ರಾಜ್ಯಗಳ ಪ್ರತಿನಿಧಿಗಳಿಂದ ಮಾಹಿತಿ ಪಡೆದ ಪ್ರಧಾನಿ ಮೋದಿ ಬಳಿಕ  ಕೊರೋನಾ ನಿಯಂತ್ರಣ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯಗಳಿಗೆ ತಿಳಿ ಹೇಳಿದರು. ಉತ್ತರ ಪ್ರದೇಶ, ಹರ್ಯಾಣ ಮತ್ತು ದೆಹಲಿಯ ಕೆಲವು ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಒಂದು ಹಂತದವರೆಗೂ ದೊಡ್ಡ ಸಮಸ್ಯೆಯಾಗಿತ್ತು. ಬಳಿಕ ನಾವು ಸಭೆ ನಡೆಸಿ ಅಮಿತ್ ಶಾ ಅವರ ನೇತೃತ್ವದಲ್ಲಿ  ಸಮಿತಿಗಳನ್ನು ರಚನೆ ಮಾಡಿದ್ದೆವು. ಇದೀಗ ನಾವು ಅಂದುಕೊಂಡಿದ್ದ ಗುರಿಗಳನ್ನು ಈ ರಾಜ್ಯಗಳಲ್ಲಿ ತಲುಪಿದ್ದೇವೆ. ಇಂತಹುದೇ ಫಲಿತಾಂಶವನ್ನು ನಾವು ಇತರೆ ರಾಜ್ಯಗಳಿಂದಲೂ ಬಯಸುತ್ತೇವೆ ಎಂದು ಹೇಳಿದ್ದಾರೆ.

ಪ್ರಮುಖವಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶದ ಒಟ್ಟಾರೆ ಸಕ್ಲಿರಯ ಪ್ರಕರಣ ಪೈಕಿ ಶೇ.80ರಷ್ಚು ಪ್ರಕರಣಗಳು ಇಂದು ನಾವು ಸಭೆ ನಡೆಸುತ್ತಿರುವ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್, ಬಿಹಾರ, ಗುಜರಾತ್, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿವೆ.  ಆದ್ದರಿಂದ ಕೊರೋನಾ ವಿರುದ್ಧದ ಹೋರಾಟದಲ್ಲಿ ಈ ಎಲ್ಲ ರಾಜ್ಯಗಳ ಪಾತ್ರ ಬಹಳ ದೊಡ್ಡದಾಗಿದೆ. ಇಂದು ದೇಶದಲ್ಲಿ 6 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ, ಈ ಪ್ರಕರಣಗಳಲ್ಲಿ ಹೆಚ್ಚಿನವು ಈ ಹತ್ತು ರಾಜ್ಯಗಳಲ್ಲೇ ಇವೆ, ದೇಶದಲ್ಲಿ ಕೋವಿಡ್ ಪರೀಕ್ಷೆಯ ಸಂಖ್ಯೆ ಪ್ರತಿದಿನ 7 ಲಕ್ಷವನ್ನು ತಲುಪಿದೆ ಮತ್ತು ಇದು  ನಿರಂತರವಾಗಿ ಹೆಚ್ಚುತ್ತಿದೆ. ಸೋಂಕನ್ನು ಗುರುತಿಸಲು ಮತ್ತು ತಡೆಯಲು ಇದು ಸಹಾಯ ಮಾಡುತ್ತದೆ. ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಕೊರೋನಾ ಸಾವಿನ ಪ್ರಮಾಣ ಮೊದಲೂ ಕಡಿಮೆ ಇತ್ತು. ಈಗಲೂ ಕಡಿಮೆ ಇದೆ. ಇದು ತೃಪ್ತಿಯ ವಿಷಯವಾಗಿದೆ ಎಂದು ಮೋದಿ ಹೇಳಿದರು.

ಅಂತೆಯೇ, 'ನಾನು ತಜ್ಞರೊಂದಿಗೆ ಚರ್ಚೆ ನಡೆಸಿದ್ದು, ಅವರ ಅಭಿಪ್ರಾಯದಂತೆ ನಾವು ಈಗ ಸೋಂಕಿತರ ಸಂಪರ್ಕಿತರನ್ನು ಆದಷ್ಟು ಬೇಗ ಪತ್ತೆ ಮಾಡಿ ಅವರನ್ನೂ ಸೋಂಕಿನ ಪರೀಕ್ಷೆಗೆ ಒಳಪಡಿಸಬೇಕು. ಓರ್ವ ವ್ಯಕ್ತಿ ಸೋಂಕಿಗೆ ತುತ್ತಾದರೆ ಆತನ ಸಂಪರ್ಕಕ್ಕೆ ಬಂದವರನ್ನು 72 ಗಂಟೆಗಳೊಳಗೆ ಪತ್ತೆ ಮಾಡಿ  ಅವರನ್ನೂ ಕೂಡ ಪರೀಕ್ಷೆಗೊಳಪಡಿಸಬೇಕು. ಆಗ ಸೋಂಕು ಪ್ರಸರಣವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಹೇಳಿದ್ದಾರೆ. ಹೀಗಾಗಿ ನಾವು ಕೊರೋನಾ ವೈರಸ್ ಸೋಂಕಿತನ ಸಂಪರ್ಕಕ್ಕೆ ಬಂದವರನ್ನು 72 ಗಂಟೆಗಳಲ್ಲಿ ಪರೀಕ್ಷೆಗೊಳಪಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಇನ್ನು ಇಂದಿನ ಸಭೆಗೆ ಕರ್ನಾಟಕ ಸೇರಿದಂತೆ, ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್‌, ಬಿಹಾರ, ಗುಜರಾತ್, ತೆಲಂಗಾಣ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ಈ ವರ್ಚುವಲ್‌ ಸಭೆಗೆ ಆಹ್ವಾನಿಸಲಾಗಿತ್ತು. ಕರ್ನಾಟಕದ ವತಿಯಿಂದ ಸಿಎಂ ಬಿಎಸ್ ವೈ  ಅನುಪಸ್ಥಿತಿಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಅವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.ಇದು ಕೊರೊನಾ ಸೋಂಕು ಕಾಣಿಸಿಕೊಂಡು ನಂತರದಿಂದ ಇಲ್ಲಿವರೆಗೆ ಪ್ರಧಾನಿಯವರು ಮುಖ್ಯಮಂತ್ರಿಗಳೊಂದಿಗೆ ನಡೆಸುತ್ತಿರುವ ಏಳನೇ ವಿಡಿಯೊ ಸಂವಾದ. 3ನೇ ಹಂತದ ಲಾಕ್‌ಡೌನ್ ತೆರವುಗೊಳಿಸಿದ ನಂತರ  ಮುಖ್ಯಮಂತ್ರಿಗಳೊಂದಿಗೆ ನಡೆಸುತ್ತಿರುವ ಮೊದಲ ವರ್ಚುವಲ್‌ ಸಭೆಯಾಗಿದೆ.

SCROLL FOR NEXT