ದೇಶ

ಪ್ರಧಾನಿ ಮೋದಿಯವರ ಹೇಡಿತನದಿಂದಾಗಿ ಚೀನಾ ನಮ್ಮ ಭೂಮಿಯನ್ನು ಅತಿಕ್ರಮಿಸಿಕೊಂಡಿದೆ: ರಾಹುಲ್ ಗಾಂಧಿ 

Sumana Upadhyaya

ನವದೆಹಲಿ: ಕೊರೋನಾ ಲಾಕ್ ಡೌನ್ ಆದಲ್ಲಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಚೀನಾ ಗಡಿ ವಿಚಾರ, ಆರ್ಥಿಕತೆ ಸೇರಿದಂತೆ ಹಲವು ವಿಷಯಗಳಲ್ಲಿ ಟೀಕಿಸುತ್ತಲೇ ಬಂದಿದ್ದಾರೆ. 

ಪೂರ್ವ ಲಡಾಕ್ ನ ಗಡಿಯಲ್ಲಿ ಸೇನೆ ನಿಲುಗಡೆ ವಿಚಾರದಲ್ಲಿ ಪ್ರಧಾನಿ ಮೋದಿ ದೇಶದ ಜನರಿಗೆ ಸುಳ್ಳು ಹೇಳುತ್ತಲೇ ಬಂದಿದ್ದು, ಭಾರತದ ಭೂಮಿಯನ್ನು ಚೀನಾ ಅತಿಕ್ರಮಣ ಮಾಡಿಕೊಳ್ಳಲು ಪ್ರಧಾನಿ ಅವಕಾಶ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಪ್ರಧಾನಿಯನ್ನು ಹೊರತುಪಡಿಸಿ ದೇಶದ ಪ್ರತಿಯೊಬ್ಬರೂ ಭಾರತೀಯ ಸೇನೆಯ ಸಾಮರ್ಥ್ಯ, ಧೈರ್ಯದ ಬಗ್ಗೆ ನಂಬಿಕೆಯಿಟ್ಟಿದ್ದಾರೆ, ಪ್ರಧಾನಿಯವರ ಹೇಡಿತನದಿಂದಾಗಿ ಚೀನಾ ಭಾರತದ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ. ದೇಶದ ಪ್ರಧಾನಿಯಾಗಿ ನಮಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಕಳೆದ ಜುಲೈ 27ರಂದು ಕೂಡ ರಾಹುಲ್ ಗಾಂಧಿ, ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದ್ದು ಸರ್ಕಾರ ಸತ್ಯವನ್ನು ಮರೆಮಾಚುತ್ತಿದೆ ಎಂದು ಆರೋಪಿಸಿದ್ದರು. 

ನಿನ್ನೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಾತನಾಡಿದ್ದ ಸೋನಿಯಾ ಗಾಂಧಿ, ಇಂದಿನ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಮೌಲ್ಯ ಮತ್ತು ಸಂಪ್ರದಾಯಗಳಿಗೆ ವಿರುದ್ಧವಾಗಿ ನಿಂತಿದೆ. ಭಾರತದ ಪ್ರಜಾಪ್ರಭುತ್ವಕ್ಕೆ ಇದು ಪರೀಕ್ಷೆಯ ಸಮಯ ಎಂದು ಹೇಳಿದ್ದರು.

SCROLL FOR NEXT