ದೇಶ

ದೇಶಾದ್ಯಂತ ಮೊಹರಂ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್

Srinivasamurthy VN

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ದೇಶಾದ್ಯಂತ ಮೊಹರಂ ಮೆರವಣಿಗೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮೊಹರಂ ಮೆರವಣಿಗೆಗೆ ಸುಪ್ರೀಂಕೋರ್ಟ್ ಅನುಮತಿ ನಿರಾಕರಿಸಿದ್ದು, ಮೆರವಣಿಗೆಗೆ ಅವಕಾಶ ನೀಡುವುದರಿಂದ ಗೊಂದಲಕ್ಕೆ ಕಾರಣವಾಗುವುದಲ್ಲದೆ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದೆ.

ಉತ್ತರ ಪ್ರದೇಶದ ಪ್ರಮುಖ ಶಿಯಾ ಮುಖಂಡ ಸೈಯದ್ ಕಲ್ಬೆ ಜವಾದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, 'ನಾವು ಯಾವುದೇ ಆದೇಶ ಹೊರಡಿಸಲು ಬಯಸುವುದಿಲ್ಲ. ಮನವಿ ಅರ್ಜಿಯನ್ನು ಪುರಸ್ಕರಿಸುವುದೂ ಇಲ್ಲ’ ಎಂದು ಮುಖ್ಯ  ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ಹೇಳಿದೆ.

ಆ 30 ರಂದು ಮೊಹರಂ ಮೆರವಣಿಗೆ ನಡೆಸಲು ಶಿಯಾ ಪಂಥದ ಮುಸ್ಲಿಮರಿಗೆ ಅನುಮತಿ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿತ್ತು. ಅರ್ಜಿದಾರರು ಪುರಿ ರಥಯಾತ್ರೆಗೆ ಅನುಮತಿ ನೀಡಿರುವುದನ್ನು ಉಲ್ಲೇಖಿಸಿದಾಗ, ಅದು ಒಂದು ಜಾಗದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳದವರೆಗೆ  ನಡೆದಿದೆ. ಆದರೆ ನೀವು ಭಾರತದಾದ್ಯಂತ ಅನುಮತಿ ಕೋರುತ್ತಿದ್ದೀರಿ. ಇದು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅಂತೆಯೇ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೇಶಾದ್ಯಂತ ಮೊಹರಂ ಮೆರವಣಿಗೆಗಳನ್ನು ನಡೆಸುವುದು ಅನಗತ್ಯವಾಗಿ ಪಂಥಕ್ಕೆ ಕೆಟ್ಟ ಹೆಸರನ್ನು ತರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಶಿಯಾಗಳು ಲಕ್ನೋದಲ್ಲಿ ಕೇಂದ್ರೀಕೃತವಾಗಿರುವುದರಿಂದ ಅಲ್ಲಿ ಅನುಮತಿ ನೀಡಬೇಕೆಂದು ಅರ್ಜಿದಾರರು ಮಾಡಿದ  ಮನವಿಗೆ, ಅಲಹಾಬಾದ್ ಹೈಕೋರ್ಟ್ ಸಂಪರ್ಕಿಸುವಂತೆ ನ್ಯಾಯಾಲಯ ಸೂಚಿಸಿದೆ. 

SCROLL FOR NEXT