ದೇಶ

ಕಾಂಗ್ರೆಸ್ ನಾಯಕರ 'ಪತ್ರ'ಕ್ಕೆ ಸೋನಿಯಾ ಗಾಂಧಿ ಸಂದೇಶ:ರಾಜ್ಯಸಭೆಯಲ್ಲಿ ಐವರ ಕಾರ್ಯತಂತ್ರ ಸಮಿತಿ ರಚನೆ

Sumana Upadhyaya

ನವದೆಹಲಿ: ಕಾಂಗ್ರೆಸ್ ನಲ್ಲಿ ನಾಯಕತ್ವವನ್ನು ಪ್ರಶ್ನಿಸಿ ಇತ್ತೀಚೆಗೆ ಪತ್ರ ಬರೆದಿದ್ದ ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿರುವ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯಸಭೆಯಲ್ಲಿ ಐವರು ಸದಸ್ಯರ ಕಾರ್ಯತಂತ್ರ ಸಮಿತಿಯನ್ನು ರಚಿಸಿದ್ದಾರೆ.

ತಮ್ಮ ನಿಷ್ಠಾವಂತ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್, ಕೆ ಸಿ ವೇಣುಗೋಪಾಲ್, ಜೈರಾಮ್ ರಮೇಶ್, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಗುಲಾಂ ನಬಿ ಆಜಾದ್ ಮತ್ತು ಪಕ್ಷದ ಉಪ ನಾಯಕ ಆನಂದ್ ಶರ್ಮ ಒಳಗೊಂಡಿದ್ದಾರೆ.

ಇನ್ನು ಭುವನೇಶ್ವರ್ ಕಲಿಟಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡ ನಂತರ ಖಾಲಿಯಾಗಿದ್ದ ರಾಜ್ಯಸಭೆಯ ಮುಖ್ಯ ಸಚೇತಕ ಹುದ್ದೆಗೆ ಜೈರಾಮ್ ರಮೇಶ್ ಅವರನ್ನು ನೇಮಕ ಮಾಡಿದ್ದಾರೆ.

ಮೊನ್ನೆ ಪತ್ರ ಬರೆದು ಸಹಿ ಹಾಕಿದವರಲ್ಲಿ ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮ ಇದ್ದರು. ಪಕ್ಷದಲ್ಲಿ ಸಂಪೂರ್ಣ ಬದಲಾವಣೆ ಮಾಡಿ ಪುನಶ್ಚೇತನ ಮಾಡಬೇಕಾಗಿದ್ದು ಪೂರ್ಣಾವಧಿಯ ದೂರದೃಷ್ಟಿಯುಳ್ಳ ನಾಯಕನನ್ನು ನೇಮಿಸಬೇಕೆಂದು ಪತ್ರದಲ್ಲಿ ನಾಯಕರು ಒತ್ತಾಯಿಸಿದ್ದರು.

ಕಳೆದ ಸೋಮವಾರ ನಡೆದಿದ್ದ ವರ್ಚುವಲ್ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಇತರ ನಾಯಕರು ಈ ಪತ್ರ ಬರೆದಿದ್ದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರಲ್ಲದೆ ಅವರ ವಿರುದ್ಧ ಕ್ರಮಕ್ಕೆ ಸಹ ಒತ್ತಾಯಿಸಿದ್ದರು.

ಸದನದಲ್ಲಿ ಪಕ್ಷದ ಬಲ, ಆಡಳಿತ ಪಕ್ಷವನ್ನು ಸಮರ್ಥವಾಗಿ ಎದುರಿಸಲು ಕಾರ್ಯತಂತ್ರ ರೂಪಿಸಲು ಈ ತಂಡವನ್ನು ಸೋನಿಯಾ ಗಾಂಧಿ ರಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

SCROLL FOR NEXT