ದೇಶ

ಇನ್ನೂ ಕೇಜ್ರಿವಾಲ್ ರ ಚಲನವಲನ 'ನಿರ್ಬಂಧಿಸಲಾಗಿದೆ': ಎಎಪಿ; ಆರೋಪ ತಳ್ಳಿಹಾಕಿದ ದೆಹಲಿ ಪೊಲೀಸರು

Lingaraj Badiger

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಚಲನವಲನವನ್ನು ಇನ್ನೂ "ನಿರ್ಬಂಧಿಸಲಾಗಿದೆ" ಎಂದು ಆಡಳಿತರೂಢ ಎಎಪಿ ಬುಧವಾರ ಆರೋಪಿಸಿದೆ. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ಮುಖ್ಯಮಂತ್ರಿಗಳ ನಿವಾಸದ ಮುಖ್ಯ ಗೇಟ್ ಅನ್ನು ಮುಚ್ಚಲಾಗಿದೆ ಎಂದು ಎಎಪಿ ದೂರಿದೆ. ಆದರೆ ಎಎಪಿ ಆರೋಪವನ್ನು ನಗರ ಪೊಲೀಸರು ತಳ್ಳಿಹಾಕಿದ್ದಾರೆ. ಅಲ್ಲದೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ತಮ್ಮ ನಿವಾಸದಿಂದ ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ಸಿಂಘು ಗಡಿಯಲ್ಲಿ ಕೇಂದ್ರದ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿಯಾದ ನಂತರ ದೆಹಲಿ ಪೊಲೀಸರು ಕೇಜ್ರಿವಾಲ್ ಅವರನ್ನು ಗೃಹಬಂಧನದಲ್ಲಿರಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ) ಮಂಗಳವಾರ ಆರೋಪಿಸಿತ್ತು. ಆದರೆ ಆಪ್ ಆರೋಪ ಆಧಾರ ರಹಿತ ಎಂದು ದೆಹಲಿ ಹಿರಿಯ ಪೊಲೀಸರು ಅಧಿಕಾರಿಯೊಬ್ಬರು ಹೇಳಿದ್ದರು.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿ ವಕ್ತಾರ ರಾಘವ್ ಚಡ್ಡಾ ಅವರು, ಮುಖ್ಯಮಂತ್ರಿಯ ನಿವಾಸದ ಸುತ್ತ "ಅಘೋಷಿತ ತುರ್ತು ಪರಿಸ್ಥಿತಿ" ಇದೆ. ಕೇಂದ್ರ ಗೃಹ ಸಚಿವರ ಆದೇಶದ ಮೇರೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಚಲನವಲನವನ್ನು ಇನ್ನೂ ನಿರ್ಬಂಧಿಸಲಾಗಿದೆ ಎಂದು ನಾನು ನಿಮಗೆ ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ಎಂದಿದ್ದಾರೆ.

ಮುಖ್ಯಮಂತ್ರಿಯ ನಿವಾಸದ ಮುಖ್ಯ ಗೇಟ್ ಅನ್ನು ಇನ್ನೂ ಬಂದ್ ಮಾಡಲಾಗಿದೆ. ಒಂದು ರೀತಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ನಾವು ಕ್ರೀಡಾಂಗಣಗಳನ್ನು ರೈತರಿಗಾಗಿ ತಾತ್ಕಾಲಿಕ ಜೈಲುಗಳಾಗಿ ಪರಿವರ್ತಿಸಲು ಅನುಮತಿ ನೀಡದ ಕಾರಣ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

SCROLL FOR NEXT