ದೇಶ

ಅಸ್ಸಾಂ: ವಿಧಾನಸಭೆ ಚುನಾವಣೆಗೂ ಮುನ್ನ ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ ಸಾಧ್ಯತೆ

Lingaraj Badiger

ಗುವಾಹಟಿ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನವೇ ಅಸ್ಸಾಂ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದ್ದು, ಮುಂದಿನ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಈ ವೇಳೆ ಕೆಲವು ಕೈ ಶಾಸಕರು ಬಿಜೆಪಿಗೆ ಸೇರುವ ಸಾಧ್ಯತೆ ಇದೆ.

ಕನಿಷ್ಠ ಮೂರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇದ್ದು, ಮಾಜಿ ಸಚಿವ ಅಜಂತಾ ನಿಯೋಗ್ ಅವರು ಗುರುವಾರ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರನ್ನು ಭೇಟಿಯಾಗಿರುವುದು ಉಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಅಲ್ಲದೆ ಬುಡಕಟ್ಟು ಸಮುದಾಯದ ಶಾಸಕರಾದ ರೋಸೆಲಿನಾ ಟಿರ್ಕಿ ಮತ್ತು ರಾಜ್‌ದೀಪ್ ಗೋಲಾ ಅವರು ಕೇಸರಿ ಪಕ್ಷ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಉಹಾಪೋಹಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಕಾಂಗ್ರೆಸ್ ವಕ್ತಾರ ಬೊಬೀತಾ ಶರ್ಮಾ ಅವರು, 
ನಿಯೋಗ್ ಅವರು ಬಿಜೆಪಿ ಸೇರುತ್ತಾರೆ ಎಂದು ಮಾಧ್ಯಮಗಳು ಬಹಳ ಹಿಂದಿನಿಂದಲೂ ವರದಿ ಮಾಡುತ್ತಿವೆ. ಆದರೆ ಅವರು ಎಲ್ಲಿಯೂ ಹೋಗುತ್ತಿಲ್ಲ ಎಂದು ನಮಗೆ ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.

ಇದೇ ವೇಳೆ, "ಬಿಜೆಪಿ ತಮ್ಮ ಸ್ವಪಕ್ಷದ ಸದಸ್ಯರನ್ನು ನಾಯಕರಾಗಿ ಪರಿಗಣಿಸದೆ ಇರುವುದು ನಾಚಿಕೆಗೇಡು ಎಂದಿರುವ ಬೊಬೀತಾ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ನಾಯಕರನ್ನು ಕದಿಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದರು.

SCROLL FOR NEXT