ದೇಶ

ಸಿಸ್ಟರ್ ಅಭಯಾ ಕೊಲೆ ಪ್ರಕರಣ: ಫಾದರ್ ಥಾಮಸ್, ಸೆಫಿ ತಪ್ಪಿತಸ್ಥರು; ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು

Manjula VN

ತಿರುವನಂತಪುರ: ಕೇರಳ ರಾಜ್ಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದ್ದ ಸಿಸ್ಟರ್ ಅಭಯಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದ್ದು, ಪ್ರಮುಖ ಆರೋಪಿಗಳಾದ ಫಾದರ್ ಥಾಮಸ್, ಸಿಸ್ಟರ್ ಸೆಫಿ ಇಬ್ಬರೂ ತಪ್ಪಿತಸ್ಥರು ಎಂದು ಹೇಳಿದೆ.

1992ರ ಮಾರ್ಚ್ 27ರಂದು ಕೊಟ್ಟಾಯಂ ಪಯಸ್ ಟೆನ್ತ್ ಕಾನ್ವೆಂಟ್‌ನ ಬಾವಿಯಲ್ಲಿ 19 ವರ್ಷ ವಯಸ್ಸಿನ ಸಿಸ್ಟರ್ ಅಭಯಾ ಶವ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಪ್ರಕರಣ ಎಂದು ಸ್ಥಳೀಯ ಪೊಲೀಸರು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು.

ಆದರೆ ಅಂದಿನ ಕೊಟ್ಟಾಯಂ ನಗರಸಭೆ ಚೇರ್ಮನ್ ಪಿಸಿ ಚೆರಿಯನ್ ಮಡುಕ್ಕನಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಜೋಮೋನ್ ಪುತ್ತನ್ ಪುರಕಲ್ ಅವರು ಈ ಪ್ರಕರಣವನ್ನು ಕೋರ್ಟಿಗೆ ಮನವಿ ಮಾಡಿದ್ದರು.

ನಂತರ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿತ್ತು. ಆದರೆ ಕ್ರೈಂ ಬ್ರಾಂಚ್‌ ಪೊಲೀಸರು ಕೂಡಾ ಅಭಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಷರಾ ಹಾಕಿದರು. 1993 ಮಾರ್ಚ್ 29ಕ್ಕೆ ತನಿಖೆಯನ್ನು ಸಿಬಿಐ ವಹಿಸಿಕೊಂಡಿತು.

ಪ್ರಕರಣ ಸಂಬಂಧ ಫಾದರ್ ಥಾಮಸ್ ಎಂ.ಕೊಟ್ಟೂರ್( ಆರೋಪಿ 1), ಫಾದರ್ ಜೋಸ್ ಪೂತೃಕ್ಕಯಿಲ್, ಸಿಸ್ಟರ್ ಸೆಫಿ ಬಂಧಿಸಲಾಗಿತ್ತು. ಆದರೆ, ಎಲ್ಲರಿಗೂ ಜಾಮೀನು ಸಿಕ್ಕಿತ್ತು, 2018ರಲ್ಲಿ ಫಾದರ್ ಜೋಸ್ ಪೂತೃಕ್ಕಯಿಲ್ ಪ್ರಕರಣದಿಂದ ಖುಲಾಸೆಗೊಂಡಿದ್ದರು.

1992ರ ಮಾರ್ಚ್ 27ರಂದು ಕಾನ್ವೆಂಟ್ ರೂಮೊಂದರಲ್ಲಿ ಸಿಸ್ಟರ್ ಸೆಫಿ ಹಾಗೂ ಥಾಮಸ್ ಎಂ.ಕೊಟ್ಟೂರ್ ಇಬ್ಬರ ನಡುವೆ ನಿಕಟ ಸಂಪರ್ಕವಿದ್ದುದ್ದನ್ನು ಅಕಸ್ಮಿಕವಾಗಿ ಅಭಯಾ ನೋಡಿದ್ದಾರೆ. ನಂತರ ಕೊಟ್ಟೂರ್, ಜೋಸ್ ಹಾಗೂ ಸೆಫಿ ಸೇರಿಕೊಂಡು ಅಭಯಾರನ್ನು ಕೊಚ್ಚಿ ಕೊಂದು, ಬಾವಿಗೆ ಎಸೆದಿದ್ದರು ಎಂದು ಸಿಬಿಐ ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿತ್ತು. ಈ ಪ್ರಕರಣ ಕೇರಳ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. 

ಪ್ರಕರಣ ಸಂಬಂಧ ಇದೀಗ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಫಾದರ್ ಥಾಮಸ್, ಸಿಸ್ಟರ್ ಸೆಫಿ ಇಬ್ಬರು ದೋಷಿಗಳೆಂದು ಹೇಳಿದೆ. 

SCROLL FOR NEXT