ದೇಶ

ಸರ್ಕಾರದ ಬಗ್ಗೆ ವಿಶ್ವಾಸವಿಲ್ಲ: ರೈತರಿಗಾಗಿ ಕೊನೆಯ ಪ್ರತಿಭಟನೆ ಕೈಗೊಳ್ಳುವ ಬಗ್ಗೆ ಅಣ್ಣಾ ಹಜಾರೆ ಎಚ್ಚರಿಕೆ

Srinivas Rao BV

ಪುಣೆ: ರೈತರಿಗೆ ಸಂಬಂಧಿಸಿದಂತೆ ತಮ್ಮ ಬೇಡಿಕೆಗಳು ಈಡೇರದೇ ಇದ್ದಲ್ಲಿ ಉಪವಾಸ ಪ್ರತಿಭಟನೆ ಪ್ರಾರಂಭಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಎಚ್ಚರಿಸಿದ್ದಾರೆ. 
 
ಬೇಡಿಕೆ ಈಡೇರಿಸುವುದಕ್ಕಾಗಿ ಜನವರಿವರೆಗೂ ಸರ್ಕಾರಕ್ಕೆ ಗಡುವು ನೀಡಿರುವ ಅಣ್ಣಾ ಹಜಾರೆ, ಇದು ತಮ್ಮ ಕೊನೆಯ ಪ್ರತಿಭಟನೆ ಎಂದೂ ಹೇಳಿದ್ದಾರೆ. 

ರಾಲೇಗಣ್ ಸಿದ್ಧಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಅಣ್ಣಾ ಹಜಾರೆ, ತಾವು ಕಳೆದ ಮೂರು ವರ್ಷಗಳಿಂದ ರೈತರ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಯಾವುದೇ ವಿಷಯವನ್ನೂ ಬಗೆಹರಿಸಿಲ್ಲ ಎಂದು ಆರೋಪಿಸಿದ್ದಾರೆ. 

ಸರ್ಕಾರ ಕೇವಲ ಖಾಲಿ ಭರವಸೆಗಳನ್ನಷ್ಟೇ ನೀಡುತ್ತಿದೆ. ಆದ್ದರಿಂದ ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದೇನೆ. ಈಗ ನನ್ನ ಬೇಡಿಕೆಗಳ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ನೋಡೋಣ, ಅವರು ಒಂದು ತಿಂಗಳ ಕಾಲಾವಕಾಶ ಕೇಳಿದ್ದಾರೆ. ಆದ್ದರಿಂದ ಜನವರಿ ತಿಂಗಳಾಂತ್ಯದ ವರೆಗೆ ಗಡುವು ನೀಡಿದ್ದೇನೆ, ಬೇಡಿಕೆ ಈಡೇರದೇ ಇದ್ದಲ್ಲಿ ಆಮರಣಾಂತ ಉಪವಾಸ ಪ್ರತಿಭಟನೆ ಪ್ರಾರಂಭಿಸುತ್ತೇನೆ, ಇದು ನನ್ನ ಕೊನೆಯ ಪ್ರತಿಭಟನೆಯಾಗಿರಲಿದೆ ಎಂದು ಅಣ್ಣಾ ಎಚ್ಚರಿಸಿದ್ದಾರೆ. 

ಡಿ.14 ರಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಗೆ ಪತ್ರ ಬರೆದಿದ್ದ ಅಣ್ಣಾ ಹಜಾರೆ ಉಪವಾಸ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.

ಎಂಎಸ್ ಸ್ವಾಮಿನಾಥನ್ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸುವುದು ಹಾಗೂ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗಕ್ಕೆ ಸ್ವಾಯತ್ತತೆ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅಣ್ಣಾ ಹಜಾರೆ ಸರ್ಕಾರದ ಮುಂದೆ ಇಟ್ಟಿದ್ದಾರೆ. 

SCROLL FOR NEXT