ದೇಶ

ಮಮತಾ ಬ್ಯಾನರ್ಜಿ,ವಿಶ್ವಭಾರತಿ ಆಡಳಿತ ಮಧ್ಯೆ ತೀವ್ರಗೊಂಡ ಕ್ಯಾಂಪಸ್ ರಸ್ತೆ ವಿವಾದ

Nagaraja AB

ಕೊಲ್ಕತ್ತಾ: ನಾಲ್ಕು ವರ್ಷಗಳ ಹಿಂದೆ ಕೇಂದ್ರಿಯ ವಿಶ್ವವಿದ್ಯಾಲಯದ ಆಡಳಿತಕ್ಕೆ ನೀಡಲಾಗಿದ್ದ ರಸ್ತೆಯನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯುವುದಾಗಿ ಘೋಷಿಸಿದ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ವಿಶ್ವ ಭಾರತಿ ಆಡಳಿತ ಮಂಡಳಿ ನಡುವಿನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.

ರಸ್ತೆಯನ್ನು ಬಳಸಲು ಅವಕಾಶ ನೀಡುತ್ತಿಲ್ಲ, ಆದ್ದರಿಂದ ವಾಹನಗಳಿಗೆ ತೊಂದರೆಯಾಗುತ್ತಿದೆ ಎಂದು ಶಾಂತಿನಿಕೇತನದಲ್ಲಿ ಖಾಯಂ ಆಗಿ ವಾಸಿಸುತ್ತಿರುವ ಮತ್ತು ಸಂಸ್ಥೆಗೆ ಒಳಪಟ್ಟಿರುವ ಆಶ್ರಮ ವಾಸಿಗಳ ದೂರಿನ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಮಮತಾ ಬ್ಯಾನರ್ಜಿ ಅವರನ್ನು ಆಹ್ವಾನಿಸಿರಲಿಲ್ಲ. ರಾಜ್ಯ ಸಚಿವಾಲಯದಲ್ಲಿ ಈ ಕಾರ್ಯಕ್ರಮದ ಬಗ್ಗೆ ಮಮತಾ ಬ್ಯಾನರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂದ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.

ಬೊಲ್ಪುರದಲ್ಲಿಂದು ಆಡಳಿತಮಂಡಳಿ ಸಭೆ ನಡೆಸಿದ ಮಮತಾ ಬ್ಯಾನರ್ಜಿ, ಕೊಲ್ಕತ್ತಾದಿಂದ ಹೊರಡುವ ಮುನ್ನ ಅಶ್ರಮ ವಾಸಿಗಳ ದೂರಿನ ಹಿನ್ನೆಲೆಯಲ್ಲಿ ಕ್ಯಾಂಪಸ್ ರಸ್ತೆಯನ್ನು ವಿಶ್ವವಿದ್ಯಾಲಯದಿಂದ ಮರಳಿ ಸರ್ಕಾರದ ವಶಕ್ಕೆ ಪಡೆಯಲು ಅನುಮತಿ ನೀಡುವ ಕಡತಕ್ಕೆ ಸಹಿ ಹಾಕಲಾಗುವುದು ಎಂದು ತಿಳಿಸಿದರು. 

ವಿಶ್ವವಿದ್ಯಾಲಯ ಆಡಳಿತ ಆಶ್ರಮ ವಾಸಿಗಳ ವಾಹನಗಳನ್ನು ತಡೆದು ರಸ್ತೆಯ ಪಕ್ಕದಲ್ಲಿ ಗೋಡೆ ನಿರ್ಮಾಣವನ್ನು ಪ್ರಾರಂಭಿಸಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.

SCROLL FOR NEXT