ದೇಶ

ಪ್ರಧಾನಿ ಮೋದಿ, ಕೇಜ್ರಿವಾಲ್ ಗೆ ಯುವಕರಿಗೆ ಉದ್ಯೋಗ ನೀಡುವ ಆಸಕ್ತಿ ಇಲ್ಲ: ರಾಹುಲ್ ಗಾಂಧಿ

Lingaraj Badiger

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇಂದು ದೆಹಲಿಯಲ್ಲಿ ತಮ್ಮ ಮೊದಲ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಾಗೂ ಕೇಜ್ರಿವಾಲ್ ಅವರಿಗೆ ಯುವಕರಿಗೆ ಉದ್ಯೋಗ ನೀಡುವ ಆಸಕ್ತಿ ಇಲ್ಲ. ಬದಲಾಗಿ ಅಧಿಕಾರದಲ್ಲಿ ಉಳಿದುಕೊಳ್ಳಲು ಸಮಾಜವನ್ನು ಒಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಆರ್ಥಿಕವಾಗಿ ದಿವಾಳಿಯಾಗಿರುವ ಕೇಂದ್ರ ಸರ್ಕಾರ ಒಂದೊಂದಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಲು ಮುಂದಾಗಿದೆ. ಕೇವಲ ಏರ್ ಇಂಡಿಯಾ ಏನು ಪ್ರಧಾನಿ ಮೋದಿ ಬೇಕಾದರೆ ತಾಜ್ ಮಹಲ್’ನ್ನೂ ಮಾರಿ ಬಿಡುತ್ತಾರೆ. ಅರ್ಥ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಇರದ ವ್ಯಕ್ತಿ ಪ್ರಧಾನಿ ಕುರ್ಚಿ ಮೇಲೆ ಕುಳಿತರೇ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ ಎಂಧು ರಾಹುಲ್ ಕಿಡಿಕಾರಿದರು.

ನಿರುದ್ಯೋಗ, ಆರ್ಥಿಕ ಬಿಕ್ಕಟ್ಟಿನಂತಹ ಜ್ವಲಂತ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸಿಎಎ ಹಾಗೂ ಎನ್ ಆರ್ ಸಿ ಜಾರಿಗೆ ಮೋದಿ ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ನಿನ್ನೆಯಷ್ಠೆ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದರು. ರಾಜಕೀಯ ನಾಯಕರ ಆರೋಪ –ಪ್ರತ್ಯಾರೋಪಗಳು ತಾರಕ್ಕೆ ಮುಟ್ಟುತ್ತಿವೆ ಬರುವ ಶನಿವಾರ ದೆಹಲಿ ವಿಧಾನಸಭೆಗೆ ಮತದಾನ ನಡೆಯಲಿದೆ.

ಪ್ರಕಟಿತ ಸಮೀಕ್ಷೆಗಳು ಮತ್ತೊಮ್ಮ ದೆಹಲಿಯಲ್ಲಿ ಎಎಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. 

SCROLL FOR NEXT