ದೇಶ

ಕೊರೋನಾವೈರಸ್ ಪೀಡಿತ ವುಹಾನ್'ನಿಂದ ಮತ್ತಷ್ಟು ಭಾರತೀಯರ ಸ್ಥಳಾಂತರ: ವಿದೇಶಾಂಗ ವ್ಯವಹಾರಗಳ ಸಚಿವಾಲಯ

Manjula VN

ನವದೆಹಲಿ: ಕೊರೋನಾವೈರಸ್ ಪೀಡಿತ ವುಹಾನ್ ನಿಂದ ಮತ್ತಷ್ಟು ಭಾರತೀಯರನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ. 

ಚೀನಾದ ವುಹಾನ್ ನಗರದಲ್ಲಿ ಸಂಕಷ್ಟದಲ್ಲಿರುವ ಭಾರತೀಯರಿಗೆ ಈಗಾಗಲೇ ವೈದ್ಯಕೀಯ ಸಾಮಾಗ್ರಿಗಳನ್ನು ತಲುಪಿಸಲಾಗಿದ್ದು, ಮತ್ತೆ 100 ಭಾರತೀಯರನ್ನು ವುಹಾನ್ ನಿಂದ ಶೀಘ್ರದಲ್ಲಿಯೇ ಸ್ಥಳಾಂತರ ಮಾಡಲಾಗುತ್ತದೆ. ಚೀನಾದಲ್ಲಿ ವಿಮಾನಗಳ ಪ್ರಯಾಣಕ್ಕೆ ನಿಷೇಧ ಹೇರಲಾಗಿಲ್ಲ. ಆದರೆ, ಪ್ರಯಾಣದ ವೇಳೆ ನಿಯಮಗಳ ಪಾಲನೆಗೆ ಕೆಲ ಸಲಹೆಗಳನ್ನು ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಹೇಳಿದ್ದಾರೆ. 

ಈಗಾಗಲೇ ಭಾರತ ಸಿ-17 ಸೇನಾ ವಿಮಾನವನ್ನು ವುಹಾನ್'ಗೆ ಕಳುಹಿಸಿದ್ದು, ಸಂಕಷ್ಟದಲ್ಲಿರುವ ಭಾರತೀಯನ್ನು ಭಾರತಕ್ಕೆ ಕರೆ ತರುವ ಎಲ್ಲಾ ಯತ್ನಗಳು ನಡೆಯುತ್ತಿವೆ. ಎಂದಿನಂತೆ ಭಾರತೀಯ ಪ್ರಜೆಗಳ ಮೇಲೆ ನಿಗಾ ಇರಿಸಲಾಗಿದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತ ಈಗಾಗಲೇ ವುಹಾನ್ ಹಾಗೂ ಹುಬೆ ಪ್ರಾಂತ್ಯದಲ್ಲಿರುವ ಭಾರತೀಯರಿಗೆ ಸಲಹೆ ನೀಡಲಾಗಿದೆ. ಈಗಾಗಲೇ ಕಳೆದೊಂದು ತಿಂಗಳಿನಿಂದ 640 ಭಾರತೀಯರನ್ನು ವುಹಾನ್ ನಿಂದ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ನೆರೆ ರಾಷ್ಟ್ರಕ್ಕೆ ಸಂಕಷ್ಟ ಎದುರಾದಾಗ ಭಾರತ ಸದಾಕಾಲ ಮುಂದಡಿ ಇಟ್ಟು ಸಹಾಯ ಮಾಡುತ್ತದೆ. ಇದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೀನಾಗೆ ಸಹಾಯ ಹಸ್ತ ಚಾಚಿದ್ದಾರೆ. ಈಗಾಗಲೇ ಚೀನಾ ಅಧ್ಯಕ್ಷರಿಗೂ ಮೋದಿಯವರು ಪತ್ರ ಬರದಿದ್ದಾರೆ. 

ಚೀನಾಗೆ ಅಗತ್ಯ ವೈದ್ಯಕೀಯ ಸಹಾಯ ಸೇರಿದಂತೆ ಹಲವು ಸಹಾಯ ಮಾಡಲು ಭಾರತ ಸಿದ್ಧವಿದೆ. ಚೀನಾದ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. ಚೀನಾ ಸಹಾಯಕ್ಕೆ ಒಪ್ಪಿಗೆ ನೀಡಿದ್ದೇ ಆದರೆ, ಪರಿಹಾರ ನೀಡುವ ವಿಮಾನಗಳನ್ನು ಚೀನಾಗೆ ಕೂಡಲೇ ರವಾನಿಸಲಾಗುತ್ತದೆ ಎಂದಿದ್ದಾರೆ. 

SCROLL FOR NEXT