ನವದೆಹಲಿ: ದೆಹಲಿಯ ಶಾಹೀನ್ ಬಾಗ್ ಬಳಿಯ ಪ್ರಮುಖ ರಸ್ತೆಯ ಬ್ಯಾರಿಕೇಡ್ಗಳನ್ನು ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ತೆರವುಗೊಳಿಸಿದ್ದಾರೆ. ಆದರೆ ಸುಮಾರು ಅರ್ಧ ಘಂಟೆಯ ನಂತರ ಮತ್ತೆ ರಸ್ತೆ ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯನ್ನು ನೋಯ್ಡಾ ಮತ್ತು ಫರಿದಾಬಾದ್ನೊಂದಿಗೆ ಸಂಪರ್ಕಿಸುವ ಕಲಿಂದಿ ಕುಂಜ್-ಶಾಹೀನ್ ಬಾಗ್ ಮಾರ್ಗವನ್ನು ತಾತ್ಕಾಲಿಕ ವ್ಯವಸ್ಥೆಯಾಗಿ ಸಂಚಾರವನ್ನು ಸರಾಗಗೊಳಿಸುವ ಉದ್ದೇಶದಿಂದ ತೆರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಡಿಸೆಂಬರ್ 15 ರಿಂದ ಶಾಹೀನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧದ ಪ್ರತಿಭಟನೆ ನಡೆಯುತ್ತಿದ್ದು, ಇದರಿಂದ ದೆಹಲಿಯನ್ನು ಉತ್ತರ ಪ್ರದೇಶದೊಂದಿಗೆ ಸಂಪರ್ಕಿಸುವ ಕಲಿಂದಿ ಕುಂಜ್ ರಸ್ತೆಯನ್ನು ಮುಚ್ಚಲಾಗಿದೆ.
ಪ್ರತಿಭಟನೆ 100 ದಿನಗಳ ಸಮೀಪಿಸುತ್ತಿದ್ದಂತೆ, ಸಿಎಎ ಪ್ರತಿಭಟನಕಾರರು ರಸ್ತೆ ದಿಗ್ಬಂಧನಕ್ಕೆ ತಾವು ಜವಾಬ್ದಾರರಲ್ಲ ಎಂದು ವಾದಿಸಿದರು.
ನಾವು ಶಾಹೀನ್ ಭಾಗ್ನಲ್ಲಿ ಕೇವಲ 150 ಮೀಟರ್ ಉದ್ದದಲ್ಲಿ ಮಾತ್ರ ಪ್ರತಿಭಟನೆ ನಡೆಸುತ್ತಿದ್ದೆವೆ, ರಸ್ತೆಯನ್ನು ಬಂದ್ ಮಾಡಿಲ್ಲ. ಆದರೆ ದೆಹಲಿ ಪೊಲೀಸರು ಮೂರು ಕಡೆಯಿಂದ ರಸ್ತೆ ಬಂದ್ ಮಾಡಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.