ಗುವಾಹಟಿ: ಮಣಿಪುರ ಸರ್ಕಾರದ 12ನೇ ತರಗತಿ ರಾಜ್ಯ ಪಠ್ಯಕ್ರಮದ ರಾಜಕೀಯ ಶಾಸ್ತ್ರ ಪರೀಕ್ಷೆಯಲ್ಲಿ ಆಡಳಿತಾರೂಢ ಬಿಜೆಪಿಯ ಚುನಾವಣಾ ಗುರುತನ್ನು ಚಿತ್ರಿಸಿ, ಮಾಜಿ ಪ್ರಧಾನಿ ದಿವಂಗತ ಜವಹರಲಾಲ್ ನೆಹರೂ ಅವರ ಕೆಟ್ಟ ಗುಣಗಳನ್ನು ವಿಶ್ಲೇಷಿಸಿ ಎಂದು ಪ್ರಶ್ನೆ ಕೇಳಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಈ ಎರಡು ಪ್ರಶ್ನೆಗಳಿಗೆ ತಲಾ 4 ಅಂಕಗಳನ್ನು ನೀಡಲಾಗಿತ್ತು. ರಾಜಕೀಯ ಶಾಸ್ತ್ರ ಪ್ರಶ್ನೆಪತ್ರಿಕೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿತ್ತು. ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸಮಾಜದ ಒಂದು ವರ್ಗದವರಿಂದ ವ್ಯಾಪಕ ಟೀಕೆ ಬಂದಿದೆ. ವಿರೋಧ ಪಕ್ಷ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ನಿರ್ಮಾಣದಲ್ಲಿ ನೆಹರೂ ಅವರ ದೃಷ್ಟಿಕೋನದ ಬಗ್ಗೆ ನಾಲ್ಕು ಕೆಟ್ಟ ಗುಣಗಳನ್ನು ವಿಶ್ಲೇಷಿಸಿ ಎಂದು ಪ್ರಶ್ನೆ ಕೇಳಲಾಗಿತ್ತು.
ಇದು ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಿ, ಈ ಪ್ರಶ್ನೆಪತ್ರಿಕೆ ತಯಾರಿಕೆಯಲ್ಲಿ ತಮ್ಮ ಪಾತ್ರವೇನೂ ಇಲ್ಲ. ಪರೀಕ್ಷೆ ನಡೆಸಿದ ಮಣಿಪುರ ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಹೋಗಿ ವಿಚಾರಿಸಿ ಎಂದು ಟೀಕಾಕಾರರಿಗೆ ಹೇಳಿದ್ದಾರೆ.
ಕಾಂಗ್ರೆಸ್ ವಕ್ತಾರ ನಿಂಗೊಂಬಮ್ ಬೂಪೇಂದ ಮೈತೈ, ನೆಹರೂ ಅವರಲ್ಲಿದ್ದ ನಕಾರಾತ್ಮಕ ಗುಣಗಳನ್ನು ವಿಶ್ಲೇಷಿಸಿ ಎಂದು ವಿದ್ಯಾರ್ಥಿಗಳಲ್ಲಿ ಕೇಳಿದ್ದು ತಪ್ಪು. ಬಿಜೆಪಿ ಸರ್ಕಾರದ ಮನೋಧರ್ಮವನ್ನು ವಿದ್ಯಾರ್ಥಿಗಳ ಮೇಲೆ ಹೇರಿಕೆ ಮಾಡಲಾಗಿದೆ. ಇದು ಭಾರತದ ಮೊದಲ ಪ್ರಧಾನಿ ಮತ್ತು ಆಧುನಿಕ ಭಾರತದ ನಿರ್ಮಾತೃ ನೆಹರೂ ಅವರ ಮೇಲೆ ನಡೆದ ದಾಳಿ ಎಂದರು.