ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಗುಪ್ತಚರ ಸಂಸ್ಥೆಯ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ಹಲವು ಬಾರಿ ಚೂರಿ ಇರಿದು ಬರ್ಬರ ರೀತಿಯಲ್ಲಿ ಹತ್ಯೆ ಮಾಡಿರುವುದು ಮರಣೋತ್ತರ ಪರೀಕ್ಷೆ ವರದಿಯಿಂದ ದೃಢಪಟ್ಟಿದೆ.
ಚಾಕುವಿನಿಂದ ಹಲವು ಬಾರಿ ಇರಿತವಾಗಿರುವುದರಿಂದ ಅಂಕಿತ ಶರ್ಮಾ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿದ್ದಾರೆ.
2017ರಲ್ಲಿ ಭದ್ರತಾ ಸಹಾಯಕರಾಗಿ ಗುಪ್ತ ಚರ ಸಂಸ್ಥೆಗೆ ಸೇರಿದ್ದ ಅಂಕಿತ್ ಶರ್ಮಾ ಅವರ ಮೃತದೇಹ ಚಾಂದ್ ಬಾಗ್ ನಲ್ಲಿನ ಚರಂಡಿವೊಂದರಲ್ಲಿ ಪತ್ತೆಯಾಗಿತ್ತು.
ಕೆಲಸ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದ ಅಂಕಿತ್ ಶರ್ಮಾ ಅವರ ಮೇಲೆ ದಂಗೆಕೋರರು ದಾಳಿ ನಡೆಸಿದ್ದು, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಚರಂಡಿಗೆ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಅಂಕಿತ್ ಶರ್ಮಾ ಸಾವಿಗೆ ಸಂಬಂಧಿಸಿದಂತೆ ಆಪ್ ಕೌನ್ಸಿಲರ್ ತಾಹಿರ್ ಹುಸೇನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಹತ್ಯೆಯ ಹಿಂದೆ ತಾಹಿರ್ ಕೈವಾಡ ಇದೆ ಎಂದು ಅಂಕಿತ್ ಅವರ ತಂದೆ ರವೀಂದ್ರ ಶರ್ಮಾ ಆರೋಪಿಸಿದ್ದರು.