ದೇಶ

ಯುಪಿ ಹಿಂಸಾಚಾರದಲ್ಲಿ ಪಿಎಫ್ಐ ಪಾತ್ರ: ಸಂಘಟನೆ ನಿಷೇಧಿಸುವ ಕುರಿತು ಎಂಎಚ್ಎ ನಿರ್ಧಾರ

Lingaraj Badiger

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಪಾಪ್ಯುಲರ್ ಫ್ರಂಟ್​ ಆಫ್​ ಇಂಡಿಯಾ(ಪಿಎಫ್ಐ) ಪಾತ್ರವಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಹೀಗಾಗಿ ಸಾಕ್ಷ್ಯಗಳನ್ನು ಆಧರಿಸಿ ಕೇಂದ್ರ ಗೃಹ ಸಚಿವಾಲಯ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರವಿಶಂಕರ್ ಪ್ರಸಾದ್ ಅವರು, ಹಿಂಸಾಚಾರದಲ್ಲಿ ಪಿಎಫ್ಐ ಪಾತ್ರವಿರುವುದು ಸ್ಪಷ್ಟವಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಿಎಫ್ಐ ಹಾಗೂ ಸಿಮಿ ಸಂಘಟನೆ ವಿರುದ್ಧ ಹಲವು ಆರೋಪಿಗಳಿವೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದಾರೆ.

ಈ ಮುಂಚೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದ ಉತ್ತರ ಪ್ರದೇಶ ಸರ್ಕಾರ, ಇತ್ತೀಚಿಗೆ ರಾಜ್ಯದಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಪಿಎಫ್​ಐ ಪಾತ್ರವಿದ್ದು, ಅದನ್ನು ನಿಷೇಧಿಸುವಂತೆ ಮನವಿ ಮಾಡಿದೆ.

ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವಾಲಯ ಉತ್ತರ ಪ್ರದೇಶ ಸರ್ಕಾರದ ಮನವಿ ಸ್ವೀಕರಿಸಿದ್ದು, ಪಿಎಫ್ಐ ಸಂಘಟನೆ ನಿಷೇಧಿಸುವ ಬಗ್ಗೆ ಕಾನೂನು ತಜ್ಞರ ಹಾಗೂ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಿದೆ.

ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವಲ್ಲಿ ಪಿಎಫ್​ಐ ಸಂಘಟನೆಯ ಕಾರ್ಯಕರ್ತರೇ ಮುಖ್ಯಕಾರಣ. ಇವರೆಲ್ಲ ನಿಷೇಧಿತ ಇಸ್ಲಾಮಿಕ್​ ಗ್ರೂಪ್​​, ಸ್ಟುಡೆಂಟ್​ ಇಸ್ಲಾಮಿಕ್​ ಮೂವ್​ಮೆಂಟ್ ಆಫ್​ ಇಂಡಿಯಾ(ಸಿಮಿ) ಜತೆ ಸೇರಿಕೊಂಡು ಈ ಗಲಭೆ ನಡೆಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ದೂರಿದೆ.

SCROLL FOR NEXT