ದೇಶ

ಹಿಂಸಾಚಾರಕ್ಕೆ ಜೆಎನ್'ಯು ತತ್ತರ: ಎಫ್ಐಆರ್ ದಾಖಲು, ತನಿಖೆಗೆ ಮುಂದಾದ ದೆಹಲಿ ಸಿಸಿಬಿ ಪೊಲೀಸರು

Manjula VN

ನವದೆಹಲಿ: ದೆಹಲಿಯ ಜೆಎನ್'ಯು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಶೀಘ್ರದಲ್ಲಿಯೇ ದೆಹಲಿ ಸಿಸಿಬಿ ಪೊಲೀಸರು ತನಿಖೆ ಆರಂಭಿಸಲಿದ್ದಾರೆ. 

ಹಿಂಸಾಚಾರ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತನಿಖೆಗೆ ಆದೇಶಿಸಿದ್ದು, ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ. ಪ್ರಕರಣ ಕುರಿತ ವರದಿಯನ್ನು ಶೀಘ್ರಗತಿಯಲ್ಲಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಅಮಿತ್ ಶಾ ಸೂಚಿಸಿದ್ದಾರಂದು ತಿಳಿದುಬಂದಿದೆ. 

ಪ್ರಕರಣದ ತನಿಖೆಯನ್ನು ಜಂಟಿ ಪೊಲೀಸ್ ಆಯುಕ್ತ, ದೆಹಲಿ ಪೊಲೀಸ್, ಶಾಲಿನಿ ಸಿಂಗ್ ನೇತೃತ್ವದಲ್ಲಿ ನಡೆಯಲಿದೆ. ಈಗಾಗಲೇ ದೆಹಲಿ ಪೊಲೀಸರಲ್ಲಿ ಪ್ರಕರಣ ಕುರಿತು ದೂರುಗಳು ದಾಖಲಾಗಿದ್ದು, ಶೀಘ್ರದಲ್ಲಿಯೇ ಎಫ್ಐಆರ್ ದಾಖಲಿಸಲಾಗುತ್ತದೆ. ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಶಾಂತಿ ನೆಲೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಜೆಎನ್'ಯು ವಿಶ್ವವಿದ್ಯಾಲಯದಲ್ಲಿ ಭಾನುವಾರ ಸಂಜೆ ಏಕಾಏಕಿ ಭಾರೀ ಹಿಂಸಾಚಾರ ಸಂಭವಿಸಿದೆ. ಹತ್ತಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿರುವ ಮತ್ತು ವಿಶ್ವವಿದ್ಯಾಲಯದೊಳಗೆ ಮಾರಾಕಾಸ್ತ್ರಗಳನ್ನು ಹಿಡಿದು ದಾಳಿ ನಡೆಸಿದ ಮುಸುಕುಧಾರಿ ಗುಂಪಿನ ಬಗ್ಗೆ ದೇಶವ್ಯಾಪ್ತಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ಬೆನ್ನಲ್ಲೇ ವಿವಿಯ ಸುತ್ತಮುತ್ತ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಘಟನೆಯ ಕುರಿತು ಕೇಂದ್ರ ಗೃಹ ಸಚಿವಾಲಯ ಮತ್ತು ಮಾನಸವ ಸಂಪನ್ಮೂಲ ಸಚಿವಾಲಯ ದೆಹಲಿ ಪೊಲೀಸಿಂದ ವರದಿ ಕೇಳಿದೆ. 

ಪೌರತ್ವ ವಿರೋಧಿ ಹೋರಾಟದ ವೇಳೆ ಇತ್ತೀಚೆಗೆ ದೆಹಲಿಯ ಜಾಮಿಯಾ ಮಿಲಿಯಾ ವಿವಿ ಆವರಣದೊಳಗಿನ ಹಸಾಚಾರ ಇನ್ನೇನು ತಣ್ಣಗಾಯಿತು ಎನ್ನುವ ಹಂತದಲ್ಲೇ ನಡೆದ ಈ ಘಟನೆ ಮತ್ತೊಮ್ಮೆ ವಿದ್ಯಾರ್ಥಿ ಸಮುದಾಯವನ್ನು ಆಕ್ರೋಶದ ಮಡುವಿಗೆ ತಳ್ಳಿದೆ. 

SCROLL FOR NEXT