ದೇಶ

72ನೇ ಸೇನಾ ದಿನಾಚರಣೆ: ಹುತಾತ್ಮ ಯೋಧರಿಗೆ ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರಿಂದ ಗೌರವ ನಮನ

Sumana Upadhyaya

ನವದೆಹಲಿ: ದೇಶಾದ್ಯಂತ ಬುಧವಾರ 72ನೇ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ಜನರಲ್.ಕೆ.ಎಂ.ಕಾರ್ಯಪ್ಪ ಅವರು ಕೊನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಜ.ಸರ್ ಎಫ್ ಆರ್ ಆರ್ ಬುಚರ್ ಅವರಿಂದ 1949ರಲ್ಲಿ ಸೇನಾ ಕಮಾಂಡರ್ ಹುದ್ದೆಯನ್ನು ವಹಿಸಿಕೊಂಡು ಸ್ವಾತಂತ್ರ್ಯೋತ್ತರದಲ್ಲಿ ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡ ದಿನದ ಸ್ಮರಣೆಗಾಗಿ ಭಾರತೀಯ ಸೇನಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.


ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಸೇನೆಯ ಎಲ್ಲಾ ದರ್ಜೆಯ ಅಧಿಕಾರಿಗಳನ್ನು,ಅವರ ಕುಟುಂಬವರ್ಗದವರಿಗೆ, ನಿವೃತ್ತ ಸೇನಾ ಯೋಧರು, ನಿವೃತ್ತ ಅಧಿಕಾರಿಗಳಿಗೆ 72ನೇ ಸೇನಾ ದಿನದ ಅಂಗವಾಗಿ ಅಭಿನಂದನೆ ಸಲ್ಲಿಸಿದರು.


ಭಾರತೀಯ ಸೇನೆ ದೇಶದ ಭದ್ರತಾ ಸವಾಲುಗಳಿಗೆ ದಿಟ್ಟವಾಗಿ ಸ್ಪಂದಿಸುತ್ತಾ ಬಂದಿದೆ, ಹೆಚ್ಚು ಸಂಕೀರ್ಣ ಪರಿಸ್ಥಿತಿಯಲ್ಲಿ , ವಿವಿಧ ಆಯಾಮಗಳಲ್ಲಿ ಅತ್ಯುನ್ನತ ಮಟ್ಟದ ಪ್ರಾವೀಣ್ಯತೆಯನ್ನು ತೋರಿಸಿದ್ದು, ಅವುಗಳನ್ನು ನಿಭಾಯಿಸುವಲ್ಲಿ ಸ್ಥಿತಿ ಸ್ಥಾಪಕತ್ವವನ್ನು ಹೊಂದಿದೆ ಎಂದು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.


ಯಾವುದೇ ಯುದ್ಧ, ಸಂಘರ್ಷಗಳಲ್ಲಿ ನಮ್ಮ ಸೇನೆಯ ಯೋಧರು ಮತ್ತು ಅಧಿಕಾರಿಗಳು ದಿಟ್ಟ ಉತ್ತರ ನೀಡಿದ್ದಾರೆ. ಗಡಿ ರಕ್ಷಣೆ ವಿಚಾರದಲ್ಲಿ, ಉಗ್ರರನ್ನು ಸದೆಬಡಿಯುವ ವಿಚಾರದಲ್ಲಾಗಲಿ ವೃತ್ತಿಪರವಾಗಿ ವರ್ತಿಸಿದ್ದಾರೆ. ದೇಶಿ ನಿರ್ಮಿತ ತಂತ್ರಜ್ಞಾನವನ್ನು ಸಹ ಸೇನೆ ಸದುಪಯೋಗಪಡಿಸಿಕೊಳ್ಳುತ್ತಿದೆ ಎಂದರು.


72ನೇ ಸೇನಾ ದಿನದ ಅಂಗವಾಗಿ ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ, ವಾಯುಪಡೆ ಮುಖ್ಯಸ್ಥ ಚೀಫ್ ಮಾರ್ಷಲ್ ಆರ್ ಕೆಎಸ್ ಭದೌರಿಯಾ ಮತ್ತು ನೌಕೌಪಡೆ ಮುಖ್ಯಸ್ಥ ಚೀಫ್ ಅಡ್ಮಿರಲ್ ಕರಂಬಿರ್ ಸಿಂಗ್ ಅವರು ಇಂದು ಬೆಳಗ್ಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಅಗಲಿದ ಯೋಧರಿಗೆ ಗೌರವ ನಮನ ಸಲ್ಲಿಸಿದರು.


ಭಾರತೀಯ ಸೇನಾ ದಿನದ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಭಾರತೀಯ ಸೇನೆಯ ಸಿಬ್ಬಂದಿಗೆ ಶುಭಾಶಯ ತಿಳಿಸಿದ್ದಾರೆ. 

SCROLL FOR NEXT