ಶ್ರೀನಗರ: ಗಣರಾಜೋತ್ಸವಕ್ಕೆ ಕೆಲ ದಿನಗಳು ಬಾಕಿ ಇರುವಂತೆಯೇ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ
ಶ್ರೀನಗರದಲ್ಲಿ ಮಹತ್ವದ ಕಾರ್ಯಾಚರಣೆಯಲ್ಲಿ ಜೈಷ್-ಇ- ಮೊಹಮ್ಮದ್ ಸಂಘಟನೆಗೆ ಸೇರಿದ ಐವರು ಸಂಚುಕೋರರನ್ನು ಬಂಧಿಸಲಾಗಿದೆ.
ಗಣರಾಜ್ಯೋತ್ಸವ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಹಜಾರತ್ ಬಾಲ್ ಪ್ರದೇಶದಲ್ಲಿ ಎರಡು ಗ್ರೆನೇಡ್ ಸ್ಫೋಟವಾಗಿದ್ದು, ಜೈಷ್ -ಇ- ಮೊಹಮ್ಮದ್ ಸಂಘಟನೆಯ ಸಂಚನ್ನು ಬೇಧಿಸುವಲ್ಲಿ ಶ್ರೀನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಸಂಚುಕೋರರನ್ನು ಸದರ್ಬಲ್ ಹಜರತ್ಬಾಲ್ನ ಐಜಾಜ್ ಅಹ್ಮದ್ ಶೇಖ್, ಹಜಾರತ್ ಬಾಲ್ ಅಸಾರ್ ಕಾಲೋನಿಯ ಉಮರ್ ಹಮೀದ್ ಶೇಖ್, ಇಮ್ತಿಯಾಜ್ ಅಹ್ಮದ್, ಎಲ್ಲಹಿಬಾಗ್ ಸೌರಾದ ಶಹೀಲ್ ಫಾರೂಖ್ ಗೊಜ್ರಿ ಮತ್ತು ಸದರ್ ಬಲ್ ಹಜಾರತ್ ಬಾಲ್ ನ ನಸೀರ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದೆ.
ಸಂಚುಕೋರರಿಂದ 143 ಗೆಲಾಟಿನ್ ಕಡ್ಡಿಗಳು, 7 ದ್ವಿತೀಯ ಸ್ಫೋಟಕಗಳು, 01 ಸೈಲೆನ್ಸರ್ಸ್, 42 ಡಿಟೊನೆಟರ್ಸ್, ವಾಕಿ ಟಾಕಿ, ಸಿಡಿ ಡ್ರೈವ್, ಬ್ಯಾಟರಿಗಳು, ಬ್ಯಾಟರಿ ಚಾರ್ಜರ್, ಕಾಯಿಲ್, ಪೌಚ್, ಅಮೆರಿಕಾದ ಪ್ರವಾಸಿಗರು ಬಳಸುವ ರಾಕ್ ಸಾಕ್ ಬ್ಯಾಗ್, ನ್ಯೂಟ್ರಿಕ್ ಆಸಿಡ್ ಬಾಟಲ್ ಸೇರಿದಂತೆ ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.