ದೇಶ

ಹಣದುಬ್ಬರ ನಿಯಂತ್ರಣದಲ್ಲಿದ್ದ ದಿನಗಳನ್ನು ನಮಗೆ ವಾಪಾಸ್ ಕೊಡಿ- ಕೇಂದ್ರವನ್ನು ಆಗ್ರಹಿಸಿದ ಶಿವಸೇನಾ

Nagaraja AB

ಮುಂಬೈ: ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನಾ, ಪ್ರಧಾನಿ ಮೋದಿ ಭರವಸೆ ನೀಡಿದ್ದಂತೆ ಅಚ್ಚೇ ದಿನ್ ಎಲ್ಲೂ ಕಾಣುತ್ತಿಲ್ಲ. ಅಷ್ಟು ಒಳ್ಳೆಯ ದಿನಗಳು ಅಲ್ಲದ ಹಣದುಬ್ಬರ ನಿಯಂತ್ರಣದಲ್ಲಿದ್ದ ದಿನಗಳನ್ನು  ನಮಗೆ ವಾಪಾಸ್ ಮರಳಿಸಿ ಎಂದು ಆಗ್ರಹಿಸಿದೆ.

ಗಗನಮುಖಿಯಾಗುತ್ತಿರುವ ಹಣದುಬ್ಬರದಿಂದ ಜನ ಸಾಮಾನ್ಯರು ತೀವ್ರ ತೊಂದರೆ ಎದುರಿಸುವಂತಾಗಿದೆ. 2014ಕ್ಕೂ ಮುಂಚೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರವೂ ಕೆಲ ಸಮಸ್ಯೆಗಳು ಹಾಗೆಯೇ ಇವೆ ಎಂದು ಶಿವಸೇನಾ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಆರೋಪಿಸಲಾಗಿದೆ.

ಅಚ್ಚೇ ದಿನ ಯಾವಾಗ ಬರುತ್ತದೆ? ಎಂದು ಪ್ರಶ್ನಿಸಲಾಗಿದ್ದು, ಹಣದುಬ್ಬರ ಜನರನ್ನು ಕೊಲ್ಲುತ್ತಿದ್ದು, ಯಾವುದೇ ಉದ್ಯೋಗವಕಾಶಗಳು ದೊರೆಯತ್ತಿಲ್ಲ. ಹಣದುಬ್ಬರ ನಿಯಂತ್ರಣದಲ್ಲಿದ್ದ ದಿನಗಳನ್ನು ನಮಗೆ ವಾಪಾಸ್ ನೀಡಿ ಎಂದು ಕೇಂದ್ರ ಸರ್ಕಾರವನ್ನುಒತ್ತಾಯಿಸಲಾಗಿದೆ. 

ಪೌರತ್ವ ತಿದ್ದುಪಡಿ ಕಾಯ್ದೆಯಂತರ ಕಾನೂನು ರೂಪಿಸುವಲ್ಲಿ ಬ್ಯುಸಿಯಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಉದ್ಯೋಗ ಕೊರತೆ, ತರಕಾರಿ ಮತ್ತಿತರ ಆಹಾರ ಪದಾರ್ಥಗಳ ಬೆಲೆ ಏರಿಕೆ ಬಗ್ಗೆ ಬಾಯಿ ಬಿಡುತ್ತಿಲ್ಲ ಎಂದು ಟೀಕಿಸಲಾಗಿದೆ. 

ಹಣದುಬ್ಬರ ನಿರೀಕ್ಷಿಗಿಂತಲೂ ದುಪ್ಪಾಟು ಆಗಿದೆ. ಸಗಟು ವಲಯದಲ್ಲಿ ಹಣದುಬ್ಬರದಿಂದ ಜನ ಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ಹಣದುಬ್ಬರ ನಿಯಂತ್ರಣಕ್ಕೆ ಮುಂದಾಗದಿದ್ದರೆ ಸರ್ಕಾರದ ವಿರುದ್ದ ಅವರ ಆಕ್ರೋಶ ಸ್ಪೋಟಿಸಲಿದೆ ಎಂದು ಸಂಪಾದಕೀಯದಲ್ಲಿ ಎಚ್ಚರಿಕೆ ನೀಡಲಾಗಿದೆ. 

ನಾಗರಿಕರು ಅನುಭಿಸುತ್ತಿರುವ ಪ್ರಮುಖ ಯಾತನೆಗಳ ಕಡೆಗೆ ಗಮನ ನೀಡದೆ ಸಿಎಎ, ಎನ್ ಆರ್ ಸಿ, ಎನ್ ಪಿಆರ್ ನತ್ತ ಗಮನ ನೀಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸಾಮ್ನಾ ಸಂಪಾದಕೀಯದಲ್ಲಿ ವಾಗ್ದಾಳಿ ನಡೆಸಲಾಗಿದೆ. 

SCROLL FOR NEXT