ದೇಶ

ಸಿಎಎ ಅನುಷ್ಠಾನವನ್ನು ರಾಜ್ಯಗಳು ನಿರಾಕರಿಸುವಂತಿಲ್ಲ: ಕಪಿಲ್ ಸಿಬಲ್

Raghavendra Adiga

ಹಿರಿಯ ನಾಯಕನ ಹೇಳಿಕೆಗೆ ಕೈ ಪಕ್ಷ ಪ್ರಬಲ ವಿರೋಧ

ಕೊಝಿಕೊಡ್: ಈಗಾಗಲೇ ಸಂಸತ್ತು ಅಂಗೀಕರಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)  ಯನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯವು ಯಾವ ಕಾರಣಕ್ಕೂ ನಿರಾಕರಿಸಬಾರದು  ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಶನಿವಾರ ಹೇಳಿದ್ದಾರೆ, ಹಾಗೆ ಮಾಡುವುದು "ಅಸಂವಿಧಾನಿಕ" ಎಂದು ಅಭಿಪ್ರಾಯಪಟ್ಟಿದ್ದಾರೆ.

"ಸಿಎಎ ಅಂಗೀಕಾರ ಕುರಿತು  ಯಾವುದೇ ರಾಜ್ಯವು 'ನಾನು ಅದನ್ನು ಕಾರ್ಯಗತಗೊಳಿಸುವುದಿಲ್ಲ' ಎಂದು ಹೇಳಲು ಸಾಧ್ಯವಿಲ್ಲ. ಅದು ಅಸಂವಿಧಾನಿಕವಾಗುತ್ತದೆ. ನೀವು ಇದನ್ನು ವಿರೋಧಿಸಬಹುದು, ನೀವು ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಬಹುದು ಮತ್ತು ಅದನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಕೇಳಬಹುದು.ಆದರೆ ನಾನು ಅದನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಸಾಂವಿಧಾನಿಕವಾಗಿ ಹೇಳುವುದು ಸಮಸ್ಯೆಯಾಗಲಿದೆ ಮತ್ತು ಹೆಚ್ಚಿನ ತೊಂದರೆಗಳನ್ನು ಸೃಷ್ಟಿಸುತ್ತದೆ" ಎಂದು ಕೇರಳ ಸಾಹಿತ್ಯ ಉತ್ಸವದ (ಕೆಎಲ್‌ಎಫ್) ಮೂರನೇ ದಿನ ಮಾಜಿ ಕಾನೂನು ಮತ್ತು ನ್ಯಾಯ ಸಚಿವ ಸಿಬಲ್ ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ಕೇರಳ ಸರ್ಕಾರವು ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಇದನ್ನು "ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಜಾತ್ಯತೀತತೆಯ ತತ್ವಗಳ ಉಲ್ಲಂಘನೆ" ಎಂದು ಘೋಷಿಸಲು ಕೋರಿದೆ. ಈ ಕಾಯ್ದೆಯನ್ನು ಪ್ರಶ್ನಿಸಿದ ಮೊದಲ ರಾಜ್ಯ ಕೇರಳವಾಗಿದ್ದು ಕೇರಳ ವಿಧಾನಸಭೆಯು ಕಾನೂನಿನ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ಮೊದಲ ರಾಜ್ಯವೂ ಹೌದು.ಕೇರಳವನ್ನು ಅನುಸರಿಸಿದ ಪಂಜಾಬ್ ವಿಧಾನಸಭೆ ಶುಕ್ರವಾರ ವಿವಾದಾತ್ಮಕ ಕಾನೂನನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿತು. ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು ಸಿಎಎ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿವೆ.

ಕಪಿಲ್ ಸಿಬಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್, "ಸಂವಿಧಾನಾತ್ಮಕವಾಗಿ, 'ಸಂಸತ್ತು ಅಂಗೀಕರಿಸಿದ ಕಾನೂನನ್ನು ನಾನು ಅನುಸರಿಸುವುದಿಲ್ಲ' ಎಂದು ಹೇಳಲು ರಾಜ್ಯ ಸರ್ಕಾರಕ್ಕೆ ಕಷ್ಟವಾಗುತ್ತದೆ. ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡದಿದ್ದರೆ ಅದು ಕಾನೂನಾಗಿಯೇ ಉಳಿಯಲಿದೆ.ಹಾಗಾಗಿ ಅದನ್ನು ಪಾಲಿಸುವುದು ಅನಿವಾರ್ಯ. "ಈ ಕಾನೂನಿನ ಮಟ್ಟಿಗೆ ರಾಜ್ಯ ಸರ್ಕಾರಗಳು ಕೇಂದ್ರದೊಂದಿಗೆ ಬಹಳ ಗಂಭೀರವಾದ ಭಿನ್ನಾಭಿಪ್ರಾಯವನ್ನು ಹೊಂದಿರುವ ಕಾರಣ ಸುಪ್ರೀಂ ಕೋರ್ಟ್‌ನ ಅಂತಿಮ ಘೋಷಣೆಗೆ ನಾವು ಕಾಯುತ್ತೇವೆ. ಅಂತಿಮವಾಗಿ, ನ್ಯಾಯಾಲಯ ನಿರ್ಧರಿಸುತ್ತದೆ ಮತ್ತು ಅಲ್ಲಿಯವರೆಗೆ ಎಲ್ಲವೂ ತಾತ್ಕಾಲಿಕ " ಎಂದಿದ್ದಾರೆ.

ಕಪಿಲ್ ಸಿಬಲ್, ಹೇಳಿಕೆ ಸಮರ್ಥಿಸಿದ  ಎಎಪಿ ನಾಯಕ ಸಂಜಯ್ ಸಿಂಗ್ ಅವರು ಒಮ್ಮೆ ಸಂಸತ್ತು ಅಂಗೀಕರಿಸಿದ ಕಾನೂನನ್ನು ರಾಜ್ಯ ಸರ್ಕಾರವು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು."ಸಿಬಲ್  ಕಾನೂನುಬದ್ಧವಾಗಿ ಸರಿಯಾದ ವಿಷಯವನ್ನು ಹೇಳುತ್ತಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸುವುದು ಉತ್ತಮ ಡ್ರಾಮಾ ಆಗಬಹುದು ಆದರೆ ಅದು ರಾಜ್ಯದಲ್ಲಿ ಆ ಕಾನೂನು ಪಾಲನೆಯಾಗುವುದನ್ನು ತಡೆಯುವುದಿಲ್ಲಾದು ಸಾಧ್ಯವಾಗಬೇಕಾದಲ್ಲಿ ಸಂಸತ್ತಿನಲ್ಲಿ ಮತ್ತೆ ಆ ಕಾನೂನನ್ನು ಹಿಂದೆಗೆದುಕೊಳ್ಲಬೇಕಾಗುವುದು" ಎಂದಿದ್ದಾರೆ.

ಕಪಿಲ್ ಸಿಬಲ್ ಹೇಳಿಕೆಗೆ ಕಾಂಗ್ರೆಸ್ ಆಕ್ಷೇಪ

ಪೌರತ್ವ ಕಾನೂನಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರದೊಂದಿಗೆ ಭಿನ್ನಾಭಿಪ್ರಾಯ ಹೊಂದುವ ಹಕ್ಕು ರಾಜ್ಯಗಳಿಗೆ ಇದೆ ಮತ್ತು ಅದನ್ನು ಕಾರ್ಯಗತಗೊಳಿಸಲು "ಒತ್ತಾಯಿಸಲು" ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷ ಇಂದು ಹೇಳಿದೆ. ಪಕ್ಷದ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ ಅವರು ನೀಡಿದ ಹೇಳಿಕೆಯಲ್ಲಿ, ಬಿಜೆಪಿ ನೇತೃತ್ವದ "ಸ್ಥಾಪಿತ ಸಂಸದೀಯ ಅಭ್ಯಾಸ" ವನ್ನು ವಿರೋಧಿಸುವುದು ನ್ಯಾಯಬದ್ದವಾಗಿದೆ.ಇದು ರಾಜ್ಯಗಳಿಗೆ ಕೇಂದ್ರವನ್ನು ಒಪ್ಪಲು ಮತ್ತು ಸವಾಲು ಮಾಡಲು ಅವಕಾಶ ನೀಡುತ್ತದೆ. ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡುವವರೆಗೂ ಪೌರತ್ವ (ತಿದ್ದುಪಡಿ) ಕಾಯ್ದೆ ಅಥವಾ ಸಿಎಎ ಅನುಷ್ಠಾನ ಬಾಕಿ  ಉಳಿಯಲಿದೆ ಎಂದಿದ್ದಾರೆ.

"ಭಾರತವು ರಾಜ್ಯಗಳ ಒಕ್ಕೂಟ ಎಂಬುದನ್ನು ಬಿಜೆಪಿ ಸರ್ಕಾರ ಮತ್ತು ಅದರ ರಾಜ್ಯಪಾಲರು ಮರೆಯಬಾರದು. ಸ್ಥಾಪಿತ ಸಂಸತ್ತಿನ ಅಭ್ಯಾಸದ ಪ್ರಕಾರ , ರಾಜ್ಯಗಳು ಒಕ್ಕೂಟವನ್ನು ಒಪ್ಪುವುದಿಲ್ಲ ಮತ್ತು 131 ನೇ ವಿಧಿ ಅನ್ವಯ ತಮ್ಮ ಸಾಂವಿಧಾನಿಕ ಹಕ್ಕಿನ ಮೂಲಕ ಸವಾಲು ಮಾಡಬಹುದು" ಎಂದು ಸುರ್ಜೆವಾಲಾ ಹೇಳಿದರು. 

ಈ ಹಿಂದೆ, ಅನೇಕ ರಾಜ್ಯಗಳು - ಕರ್ನಾಟಕ, ಬಿಹಾರ ಮತ್ತು ರಾಜಸ್ಥಾನ,ಹೀಗೆ ಅನೇಕ ರಾಜ್ಯಗಳು ರತದ ಒಕ್ಕೂಟದೊಂದಿಗಿನ ವಿವಾದಗಳನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿವೆ ಎಂದು ಅವರು ಹೇಳಿದರು.

SCROLL FOR NEXT