ದೇಶ

ಕೇರಳ ವಿಧಾನಸಭೆಯಲ್ಲಿ ನಾಟಕೀಯ ಬೆಳವಣಿಗೆ: ಸರ್ಕಾರದ ಸಿಎಎ ವಿರೋಧಿ ನಿಲುವನ್ನು ಓದಿದ ರಾಜ್ಯಪಾಲರು 

Sumana Upadhyaya

ತಿರುವನಂತಪುರ: ವಾರವಿಡೀ ಅಸ್ಥಿರತೆ ಮತ್ತು ಊಹಾಪೋಹಗಳ ನಂತರ ಕೇರಳ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಬುಧವಾರ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನ ವಿಧಾನಸಭೆಯಲ್ಲಿ ಸರ್ಕಾರದ ನೀತಿ ಯೋಜನೆಗಳನ್ನು ಪ್ರಕಟಿಸಿದರು.


ಇಂದು ಸದನಕ್ಕೆ ಭಾಷಣ ಮಾಡಲು ಆಗಮಿಸಿದಾಗ ಅವರಿಗೆ ಯುಡಿಎಫ್ ಸದಸ್ಯರು 'ಗೋ ಬ್ಯಾಕ್ ಗವರ್ನರ್'' ಎಂದು ಬರೆದ ಫಲಕಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದ್ದು ವಿಶೇಷವಾಗಿತ್ತು. ಅವುಗಳನ್ನು ಲೆಕ್ಕಿಸದೆ ಭದ್ರತೆಗಾರರ ರಕ್ಷಣೆಯೊಂದಿಗೆ ಸ್ಪೀಕರ್ ವೇದಿಕೆಗೆ ಬಂದು ರಾಜ್ಯಪಾಲರು ಭಾಷಣ ಓದಲು ಆರಂಭಿಸಿದರು.ಈ ಮಧ್ಯೆ ಸದಸ್ಯರ ಕೂಗು, ಗದ್ದಲ ಮುಂದುವರಿದಿತ್ತು. ರಾಜ್ಯ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹೇಳಿಕೆಗಳನ್ನು ಸಹ ಓದಿದರು. ಆದರೆ ತಾವು ರಾಜ್ಯ ಸರ್ಕಾರದ ಸಿಎಎ ವಿರೋಧಿ ನಿಲುವನ್ನು ಬೆಂಬಲಿಸುವುದಿಲ್ಲ ಎಂದು ಭಾಷಣದಲ್ಲಿ ರಾಜ್ಯಪಾಲರು ತೋರಿಸಿಕೊಟ್ಟರು. 


ಸರ್ಕಾರದ ಯೋಜನಾ ಭಾಷಣದಲ್ಲಿ ಸಿಎಎ ಬಗ್ಗೆ ವಿವಾದಿತ ಹೇಳಿಕೆ ನೀಡುವ ಮುನ್ನ ರಾಜ್ಯಪಾಲರು ತಾವು ಸಿಎಎ ಬಗ್ಗೆ ವಿಭಿನ್ನ ನಿಲುವು ಹೊಂದಿದ್ದರೂ ಮುಖ್ಯ ಮಂತ್ರಿಗಳ ಪರವಾಗಿ ವಿವಾದಿತ ಹೇಳಿಕೆಗಳನ್ನು ಓದುವುದಾಗಿ ಹೇಳಿದರು. 


''ನಾನೀಗ 18ನೇ ವಾಕ್ಯವನ್ನು ಓದುತ್ತೇನೆ, ಇದು ಸರ್ಕಾರದ ನೀತಿ ಯೋಜನೆ ಕಾರ್ಯಕ್ರಮದ ಭಾಗವಾಗಿರದಿದ್ದರೂ ಸಹ ಮುಖ್ಯಮಂತ್ರಿಗಳ ಪರವಾಗಿ ನಾನಿದನ್ನು ಓದುತ್ತೇನೆ. ಇದು ಸರ್ಕಾರದ ನಿಲುವು ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದರೆ ನಾನು ಇದನ್ನು ವಿರೋಧಿಸುತ್ತೇನೆ, ಆದರೆ ಅವರ ಆಶಯಕ್ಕೆ ಗೌರವ ಕೊಟ್ಟು ನಾನು ಇದನ್ನು ಓದುತ್ತೇನೆ ಎಂದು ರಾಜ್ಯಪಾಲರು ಓದಿದರು.

SCROLL FOR NEXT