ದೇಶ

ಸಂಸತ್ತಿನ ಬಜೆಟ್ ಅಧಿವೇಶನ ಇಂದು ಆರಂಭ: ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 

Sumana Upadhyaya

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಶುಕ್ರವಾರ ಆರಂಭವಾಗಲಿದೆ. ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2019-20ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಸದನದಲ್ಲಿ ಮಂಡಿಸಲಿದ್ದಾರೆ. ನಾಳೆ ಲೋಕಸಭೆಯಲ್ಲಿ ಅವರು ಪ್ರಸಕ್ತ ಹಣಕಾಸು ವರ್ಷದ ಬಜೆಟ್ ಮಂಡಿಸಲಿದ್ದಾರೆ.


ಇಂದು ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಭಾಷಣ ಮಾಡಲಿದ್ದು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ರಾಜ್ಯಸಭಾ ಸದಸ್ಯರ ಸಭೆಯನ್ನು ತಮ್ಮ ನಿವಾಸದಲ್ಲಿ ಏರ್ಪಡಿಸಲಿದ್ದಾರೆ. 


ಸಂಸತ್ತಿನ ಮೊದಲ ಹಂತದ ಅಧಿವೇಶನ ಫೆಬ್ರವರಿ 11ರಂದು ಮುಕ್ತಾಯವಾಗಲಿದ್ದು ಅಧಿವೇಶನದ ಎರಡನೇ ಭಾಗ ಮಾರ್ಚ್ 2ರಿಂದ ಏಪ್ರಿಲ್ 3ರವರೆಗೆ ನಡೆಯಲಿದೆ. ಬಜೆಟ್ ಅಧಿವೇಶನಕ್ಕೆ ಮುನ್ನ ನಿನ್ನೆ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆಯನ್ನು ಕರೆದಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹಿರಿಯ ಸಚಿವರುಗಳು, ಕಾಂಗ್ರೆಸ್ ನಿಂದ ಗುಲಾಂ ನಬಿ ಆಜಾದ್, ಆನಂದ್ ಶರ್ಮ, ಟಿಎಂಸಿಯಿಂದ ಸುದೀಪ್ ಬಂಡೋಪಾಧ್ಯಾಯ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. 


ಇಂದು ಅಪರಾಹ್ನ 2 ಗಂಟೆಗೆ ಸಂಸತ್ತಿನ ಲೈಬ್ರೆರಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ನಂತರ 3.30ಕ್ಕೆ ಎನ್ ಡಿಎ ಮೈತ್ರಿಕೂಟಗಳ ಸಭೆ ಕೂಡ ಏರ್ಪಡುವ ನಿರೀಕ್ಷೆಯಿದೆ. 

SCROLL FOR NEXT