ದೇಶ

ಬಜೆಟ್ ಅಧಿವೇಶನಕ್ಕೆ ಮುನ್ನ ಕಾಂಗ್ರೆಸ್ ಪ್ರತಿಭಟನೆ, ಜಾಮಿಯಾ ಶೂಟರ್ ಗೆ ಹಣ ಕೊಟ್ಟಿದ್ದು ಯಾರು?: ರಾಹುಲ್ ಗಾಂಧಿ

Sumana Upadhyaya

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಶುಕ್ರವಾರ ಸಂಸತ್ತು ಆವರಣದ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ವಿರೋಧಿಸಿ ಒಗ್ಗಟ್ಟನ್ನು ಪ್ರದರ್ಶಿಸಿ ಸಂವಿಧಾನವನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್ ನಾಯಕರಿಗೆ ಡಿಎಂಕೆ ನಾಯಕರು ಕೂಡ ಪ್ರತಿಭಟನೆಯಲ್ಲಿ ಸಾಥ್ ಕೊಟ್ಟಿದ್ದರು. 


ಇನ್ನು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿಗಳು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವಾಗ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿ ಉಭಯ ಸದನಗಳ ಕಾಂಗ್ರೆಸ್ ಸಂಸದರು ಸರ್ಕಾರದ ವಿರುದ್ಧ ತಮ್ಮ ವಿರೋಧವನ್ನು ಪ್ರದರ್ಶಿಸಿದರು.ತಮ್ಮ ನಿಯೋಜಿತ ಸ್ಥಳಗಳನ್ನು ತೊರೆದು ಕಪ್ಪು ಪಟ್ಟಿ ಧರಿಸಿದ ಸಂಸದರು ಹಾಲ್ ನ ಒಂದು ಭಾಗದಲ್ಲಿ ಒಟ್ಟಾಗಿ ಕುಳಿತಿದ್ದರು. 


ಇಂದು ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಯುವಾಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್, ಮೋತಿಲಾಲ್ ವೊಹ್ರ, ಅಹ್ಮದ್ ಪಟೇಲ್, ಅಧೀರ್ ರಂಜನ್ ಚೌಧರಿ, ಎ ಕೆ ಆಂಟನಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಸಂವಿಧಾನವನ್ನು ರಕ್ಷಿಸಿ ಎಂದು ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

 
ಇನ್ನು ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಂಸತ್ತಿಗೆ ಪ್ರವೇಶಿಸುವ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ರಾಹುಲ್ ಗಾಂಧಿ, ಜಾಮಿಯಾ ವಿಶ್ವವಿದ್ಯಾಲಯದ ಹೊರಗೆ ನಿನ್ನೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುವವರ ಮೇಲೆ ಗುಂಡಿಕ್ಕಿದ ವ್ಯಕ್ತಿಗೆ ಆ ರೀತಿ ಮಾಡಲು ಯಾರು ಹೇಳಿದ್ದರು, ಆತನಿಗೆ ಯಾರು ಹಣ ನೀಡಿದ್ದರು ಎಂದು ಪ್ರಶ್ನಿಸಿದರು. 


ನಿನ್ನೆ ರಾಹುಲ್ ಗಾಂಧಿ ಟ್ವೀಟ್ ಮಾಡಿ ಮಹಾತ್ಮಾ ಗಾಂಧಿಯವರ ಹಿಂಸೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದರು. 

SCROLL FOR NEXT