ದೇಶ

ಕೋವಿಡ್-19: ರಾಜ್ಯದ ಆಶಾ ಕಾರ್ಯಕರ್ತೆಯರ ಪಾತ್ರವನ್ನು ಶ್ಲಾಘಿಸಿದ ಕೇಂದ್ರ ಆರೋಗ್ಯ ಸಚಿವಾಲಯ!

Nagaraja AB

ನವದೆಹಲಿ: ಕೋವಿಡ್-19 ಎದುರಿಸುವಲ್ಲಿ ರಾಜ್ಯದ ಆಶಾ ಕಾರ್ಯಕರ್ತೆಯರು ಪ್ರಮುಖ ಆಧಾರ ಸ್ತಂಭವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಮುಕ್ತ ಕಂಠದಿಂದ ಶ್ಲಾಘಿಸಿದೆ.

ಸೋಂಕಿನ ಲಕ್ಷಣ ಪತ್ತೆಗಾಗಿ ಮನೆ ಮನೆ ಸರ್ವೇ ಕಾರ್ಯ ಹಾಗೂ ಅಂತರ ರಾಜ್ಯ ಪ್ರಯಾಣಿಕರು, ವಲಸೆ ಕಾರ್ಮಿಕರು ಮತ್ತು ಇತರ ಸಮುದಾಯದ ತಪಾಸಣೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದ್ದು, ಅವರ ಸೇವೆಯನ್ನು ಪ್ರಶಂಸಿಸಿದೆ.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ತೊಡಗಿಸಿಕೊಳ್ಳುವ ಮೂಲಕ ರಾಜ್ಯದ ಪ್ರಮುಖ ಆಧಾರ ಸ್ತಂಭವಾಗಿ ಹೊರ ಹೊಮ್ಮುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ.

ಒಂದು ಬಾರಿ ಸರ್ವೇಯಲ್ಲಿ ಸುಮಾರು 1.59 ಕೋಟಿ  ನಿವಾಸಿಗಳನ್ನು ಸರ್ವೇ ನಡೆಸಲಾಗಿದ್ದು, ರೋಗ ನಿರೋಧಕ ಶಕ್ತಿ ಇಲ್ಲದವರು, ವೃದ್ಧರನ್ನು ಪತ್ತೆ ಹಚ್ಚಿದ್ದಾರೆ. ಕಂಟೈನ್ ಮೆಂಟ್ ವಲಯಗಳಲ್ಲಿ ಒಂದು ಬಾರಿ ಹಾಗೂ ಇತರ ಪ್ರದೇಶಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಭೇಟಿ ನೀಡುವ ಮೂಲಕ ತೊಂದರೆಯಲ್ಲಿರುವ ಜನರ ಬಗ್ಗೆ  ಪ್ರತಿನಿತ್ಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ  ತಿಳಿಸಿದೆ.

ಐಎಲ್ ಐ ಹಾಗೂ ತೀವ್ರ ಉಸಿರಾಟದಂತಹ ಸಮಸ್ಯೆ ವುಳ್ಳವರ ಮನೆಗಳಿಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ  ಕೋವಿಡ್-19 ಮತ್ತು ಕೋವಿಡ್-19 ಯೇತರ ಸೇವೆಗಳಿಗೆ ಸಂಬಂಧಿಸಿದಂತೆ ಪಿಡಿಒ ನೇತೃತ್ವದಲ್ಲಿನ ಗ್ರಾಮೀಣ ಟಾಸ್ಕ್ ಫೋರ್ಸ್ ಭಾಗವಾಗಿಯೂ ತೊಡಗಿಸಿಕೊಂಡಿದ್ದಾರೆ.ಸಮುದಾಯ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯ ಕೊಂಡಿಯಾಗಿ ಆಶಾ ಕಾರ್ಯನಿರ್ವಹಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಫೀವರ್ ಕ್ಲಿನಿಕ್ ಮತ್ತು ಮಾದರಿ ಸಂಗ್ರಹ ಕೇಂದ್ರಗಳಲ್ಲಿ ವಿವಿಧ ರೋಗಗಳ ಕುರಿತು ಜನ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.

ನಗರ ಪ್ರದೇಶದ ಐಎಲ್ ಐ ಮತ್ತು ಸಾರಿ ಸಮಸ್ಯೆವುಳ್ಳವರ ತಪಾಸಣೆ ಜೊತೆಗೆ ಅಂತಾರಾಷ್ಟ್ರೀಯ ಮತ್ತು ಅಂತರ್ ರಾಜ್ಯ ಚೆಕ್ ಫೋಸ್ಟ್ ಗಳಲ್ಲಿ ತಪಾಸಣಾ ತಂಡದಲ್ಲಿಯೂ ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಆರೋಗ್ಯ ಸಚಿವಾಲಯದ ಬೆಳಗ್ಗಿನ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಕೋವಿಡ್- 19 ನಿಂದ 272 ರೋಗಿಗಳು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 18,016 ಆಗಿದೆ.

SCROLL FOR NEXT