ದೇಶ

ಚೆನ್ನೈ: ಎಟಿಎಂಗೆ ಸೋಂಕು ನಿವಾರಕ ಸಿಂಪಡಿಸುವ ನೆಪದಲ್ಲಿ 8.2 ಲಕ್ಷ ರೂ ಹಣ ದೋಚಿದ ಖತರ್ನಾಕ್ ಕಳ್ಳ!

Srinivasamurthy VN

ಚೆನ್ನೈ: ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದೇಶಾದ್ಯಂತ ಸೋಂಕು ನಿವಾರಕ ಸಿಂಪಡಣೆ ಭರದಿಂದ ಸಾಗಿದೆ. ಇದರ ನಡುವೆಯೇ ಚೆನ್ನೈನಲ್ಲೋರ್ವ ಖತರ್ನಾಕ್ ಕಳ್ಳ ಎಟಿಎಂಗೆ ಸೋಂಕು ನಿವಾರಕ ಸಿಂಪಡಣೆ ಮಾಡುವ ನೆಪದಲ್ಲಿ 8.2 ಲಕ್ಷ ಹಣವನ್ನು  ಎಗರಿಸಿದ್ದಾನೆ.

ಹೌದು.. ಚೆನ್ನೈನ ಎಂಎಂಡಿಎ ಈಸ್ಟ್ ಮುಖ್ಯರಸ್ತೆಯಲ್ಲಿರುವ ಎಟಿಎಂ ಕಿಯೋಸ್ಕ್ ನಲ್ಲಿ ಸೋಂಕು ನಿವಾರಣೆ ನೆಪದಲ್ಲಿ ಬಂದ ಕಳ್ಳನೋರ್ವ ನೋಡುತ್ತಲೇ ಎಟಿಎಂನಿಂದ 8.2ಲಕ್ಷ ರೂ ಹಣವನ್ನು ಎಗರಿಸಿದ್ದಾನೆ, ಈ ಬಗ್ಗೆ ಮಾಹಿತಿ ನೀಡಿರುವ ಎಟಿಎಂ ಸೆಕ್ಯುರಿಟಿ ಗಾರ್ಡ್, ಆಟೋರಿಕ್ಷಾದಲ್ಲಿ  ಬಂದಿಳಿದ ವ್ಯಕ್ತಿಯೋರ್ವ ಸೋಂಕು ನಿವಾರಕ ಬ್ಯಾಗ್ ಹಾಕಿಕೊಂಡು ಎಟಿಎಂಯೊಳಗೆ ಹೋಗಿದ್ದ. ಈ ವೇಳೆ ಆತ ಎಟಿಎಂ ನಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಣೆ ಮಾಡುವ ಬದಲು ಎಟಿಎಂ ಬಟನ್ ಗಳನ್ನು ಪ್ರೆಸ್ ಮಾಡುತ್ತಿದ್ದ. ಇದನ್ನು ಗಮನಿಸಿದ ಬಳಕೆದಾರರೊಬ್ಬರು ಆತ  ಬ್ಯಾಂಕ್ ಸಿಬ್ಬಂದಿ ಎಂದು ಕೊಂಡಿದ್ದರು.

ಆದರೆ ಆತ  10 ನಿಮಿಷಗಳ ಬಳಿಕ ಹೊರಗೆ ಬಂದು, ಓಡಿ ಹೋಗಿ ತಾನು ಬಂದಿದ್ದ ಆಟೋ ಏರಿ ಪರಾರಿಯಾಗಿದ್ದ. ಇದರಿಂದ ಅನುಮಾನಗೊಂಡ ಜನ ಎಟಿಎಂ ಪರಿಶೀಲಿಸಿದಾಗ ಪ್ರಕರಣ ಬಯಲಾಗಿತ್ತು. ಈ ವೇಳೆ ಆಟೋವನ್ನು ಹಿಡಿಯುವ ಪ್ರಯತ್ನ ಮಾಡಲಾಯಿತಾದರೂ ಆಟೋ  ವೇಗವಾಗಿ ಚಲಿಸಿ ಅವರು ಪರಾರಿಯಾದರು. ಈ ವಿಚಾರ ತಿಳಿಯುತ್ತಲೇ ಬ್ಯಾಂಕ್ ಮ್ಯಾನೇಜರ್ ಸ್ಥಳಕ್ಕೆ ದೌಡಾಯಿಸಿದ್ದು, ಎಟಿಎಂ ಪರಿಶೀಲಿಸಿದಾಗ 8.2 ಲಕ್ಷ ಹಣ ಕದ್ದ ಕುರಿತು ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಪೊಲೀಸ್ ದೂರು ದಾಖಲಿಸಲಾಗಿದ್ದು, ಎಟಿಎಂಗೆ ಹಣ ತುಂಬಿಸಿದ್ದ 6  ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ.

ಕಳ್ಳ ಎಟಿಎಂ ಕೀ ಮತ್ತು ಪಾಸ್ ವರ್ಡ್ ಬಳಕೆ ಮಾಡಿ ಹಣ ಎಗರಿಸಿರುವುದು ಸಿಬ್ಬಂದಿಗಳ ಕೈವಾಡದ ಕುರಿತು ಶಂಕೆ ವ್ಯಕ್ತವಾಗಿದೆ.

SCROLL FOR NEXT