ನವದೆಹಲಿ: ಬರೋಬ್ಬರಿ 9 ಸಾವಿರ ಕೋಟಿ ಸಾಲ ಪಡೆದು ವಂಚಿಸಿ ಇಂಗ್ಲೆಂಡ್ ಗೆ ಪರಾರಿಯಾಗಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಯಾವುದೇ ಕ್ಷಣದಲ್ಲಾದರೂ ಮುಂಬೈಗೆ ಬಂದಿಳಿಯುವ ಸಾಧ್ಯತೆ ಇದೆ.
ಮದ್ಯದ ದೊರೆ ವಿಜಯ್ ಮಲ್ಯರ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲಾಗಿರುವುದರಿಂದ ಸಿಬಿಐ ಹಾಗೂ ಇಡಿ ಅಧಿಕಾರಿಗಳು ಮಲ್ಯರನ್ನು ಮುಂಬೈಗೆ ಕರೆದುಕೊಂಡು ಬರಲಿದ್ದಾರೆ. ಈ ವೇಳೆ ಮಲ್ಯರ ಆರೋಗ್ಯ ಪರಿಶೀಲನೆಗೆ ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ.
ಇಂದು ರಾತ್ರಿಯೇ ವಿಜಯ್ ಮಲ್ಯ ಮುಂಬೈಗೆ ಆಗಮಿಸಿದರೆ ರಾತ್ರಿ ಸಿಬಿಐ ಕಚೇರಿಯಲ್ಲಿ ಇರಿಸಿ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಸಿಬಿಐ ಅಧಿಕಾರಿಗಳು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
2018ರ ಆಗಸ್ಟ್ ನಲ್ಲಿ ವಿಜಯ ಮಲ್ಯರನ್ನು ಮುಂಬೈನ ಆರ್ಥರ್ ರೋಡ್ ನಲ್ಲಿರುವ ಜೈಲಿನ ಕೋಣೆಯಲ್ಲಿ ಇರಿಸುವುದಾಗಿ ಸಿಬಿಐ ಅಧಿಕಾರಿಗಳು ವಿಡಿಯೋ ಮಾಡಿ ಯುಕೆ ನ್ಯಾಯಾಲಯಕ್ಕೆ ಕಳುಹಿಸಿದ್ದರು. ಇದೀಗ ಮಲ್ಯರನ್ನು ಇರಿಸಿಕೊಳ್ಳಲು ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ.
ಆರ್ಥರ್ ಜೈಲಿನಲ್ಲಿ ಮುಂಬೈ ದಾಳಿಕೋರ ಅಜ್ಮಲ್ ಕಸಬ್, ಅಬು ಸಲೀಂ, ಚೋಟಾ ರಾಜನ್, ಮುಸ್ತಫಾ ದೋಸಾ, ಪೀಟರ್ ಮುಖರ್ಜಿ ಮತ್ತು ವಿಪುಲ್ ಅಂಬಾನಿಯನ್ನು ಇರಿಸಲಾಗಿತ್ತು.