ದೇಶ

ಕೋವಿಡ್-19 ಬಿಕ್ಕಟ್ಟನ್ನು ಅವಕಾಶವೆಂದು ನೋಡಿದ್ದೇವೆ: ಆಸ್ಟ್ರೇಲಿಯಾ ಪ್ರಧಾನಿ ಜೊತೆ ವರ್ಚುವಲ್ ಶೃಂಗಸಭೆಯಲ್ಲಿ ಮೋದಿ

Sumana Upadhyaya

ನವದೆಹಲಿ: ಕೋವಿಡ್ -19 ಬಿಕ್ಕಟ್ಟನ್ನು ಒಂದು ಅವಕಾಶವಾಗಿ ನೋಡುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಭಾರತದಲ್ಲಿ, ಕೋವಿಡ್-19 ನಂತರ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಸಮಗ್ರ ಸುಧಾರಣೆಯ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.ಶೀಘ್ರದಲ್ಲೇ ಅದರ ಫಲಿತಾಂಶವು ತಳಮಟ್ಟದಿಂದ ಕಂಡುಬರಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರೊಂದಿಗೆ ನಡೆಸಿದ ವರ್ಚುವಲ್ ಶೃಂಗಸಭೆಯಲ್ಲಿ ಕೋವಿಡ್-19, ಭಾರತದ ಸ್ಥಿತಿಗತಿ, ಭಾರತ-ಆಸ್ಟ್ರೇಲಿಯಾ ಸಂಬಂಧಗಳ ಕುರಿತು ಮಾತನಾಡಿದರು.

ಮಾತು ಆರಂಭಿಸಿದ ಮೋದಿಯವರು, ಸಮಸ್ತ ಭಾರತೀಯರ ಪರವಾಗಿ ನಾನು ಆಸ್ಟ್ರೇಲಿಯಾದಲ್ಲಿ ಕೋವಿಡ್-19ಗೆ ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತೇನೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಂಬಂಧ ಸುಧಾರಿಸಲು ಇದು ಸರಿಯಾದ ಸಮಯ. ನಮ್ಮ ಸ್ನೇಹವನ್ನು ಬಲಪಡಿಸಲು ಸಾಕಷ್ಟು ಅವಕಾಶಗಳಿವೆ. ನಮ್ಮ ಸಾಮರ್ಥ್ಯಗಳನ್ನು ವಾಸ್ತವವಾಗಿ ಬದಲಾಯಿಸಲು ಕೂಡ ನಮಗೆ ಸಾಕಷ್ಟು ಸವಾಲುಗಳನ್ನು ತಂದೊಡ್ಡಿದೆ. ಇಲ್ಲಿ ನಮ್ಮ ಸಂಬಂಧ ಸ್ಥಿರತೆಗೆ ಹೇಗೆ ಕಾರಣವಾಗುತ್ತದೆ ಎಂಬುದು ಮುಖ್ಯವಾಗುತ್ತದೆ ಎಂದರು.

ಆಸ್ಟ್ರೇಲಿಯಾದೊಂದಿಗಿನ ತನ್ನ ಸಂಬಂಧವನ್ನು ಬಲಪಡಿಸಲು ಭಾರತ ಬದ್ಧವಾಗಿದ್ದು, ಇದು ನಮ್ಮ ಎರಡು ರಾಷ್ಟ್ರಗಳಿಗೆ ಮಾತ್ರವಲ್ಲದೆ ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಇಡೀ ಜಗತ್ತಿಗೆ ಮುಖ್ಯವಾಗಿದೆ ಎಂದು ಸಹ ಮೋದಿ ಹೇಳಿದರು.
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಮಾತನಾಡಿ, ನೀವು ಭಾರತದೊಳಗೆ ಮಾತ್ರ ನಾಯಕತ್ವವನ್ನು ಹೊಂದಿಲ್ಲದೆ, ಜಿ20, ಇಂಡೊ-ಫೆಸಿಫಿಕ್ ಗಳಲ್ಲಿ ಸಹ ಪ್ರಭಾವಶಾಲಿಯಾಗಿದ್ದು ಈ ಕಠಿಣ ಸಮಯದಲ್ಲಿ ನೀವು ರಚನಾತ್ಮಕ, ಸಕಾರಾತ್ಮಕ, ಸ್ಥಿರತೆಯಿಂದ ವರ್ತಿಸಿದ್ದೀರಿ. ಮುಕ್ತ, ಅಂತರ್ಗತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಗೆ ನಾವು ಬದ್ಧರಾಗಿದ್ದು, ಮುಂದಿನ ವರ್ಷಗಳಲ್ಲಿ ಆ ಪ್ರದೇಶದಲ್ಲಿ ಭಾರತದ ಪಾತ್ರ ನಿರ್ಣಾಯಕವಾಗಿರುತ್ತದೆ ಎಂದರು.

SCROLL FOR NEXT