ದೇಶ

ಭಾರತದ ಗಡಿಯೊಳಕ್ಕೆ ಯಾರೂ ನುಸುಳಿಲ್ಲ ಮತ್ತು ಯಾವುದೇ ಪೋಸ್ಟ್ ಅನ್ನು ವಶಪಡಿಸಿಕೊಂಡಿಲ್ಲ: ಪ್ರಧಾನಿ ಮೋದಿ

Lingaraj Badiger

ನವದೆಹಲಿ: ಭಾರತದ ಗಡಿಯೊಳಗೆ ಯಾರೂ ನುಸುಳಿಲ್ಲ ಮತ್ತು ಯಾರೂ ಯಾವುದೇ ಪೋಸ್ಟ್ ಅನ್ನು ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸರ್ವಪಕ್ಷ ಸಭೆಗೆ ತಿಳಿಸಿದ್ದಾರೆ.
 
ಭಾರತ-ಚೀನಾ ಗಡಿ ಘರ್ಷಣೆಯ ಹಿನ್ನೆಲೆಯಲ್ಲಿ ಇಂದು ಕರೆಯಲಾಗಿದ್ದ ವರ್ಚುಯಲ್ ಸರ್ವಪಕ್ಷ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಲಡಾಖ್ ನಲ್ಲಿ ಚೀನಿಯರ ಕೃತ್ಯದಿಂದ ಇಡೀ ದೇಶಕ್ಕೆ ನೋವಾಗಿದೆ ಮತ್ತು ಆಕ್ರೋಶಗೊಂಡಿದೆ ಎಂದರು.

ಭಾರತ ಶಾಂತಿ ಮತ್ತು ಸ್ನೇಹವನ್ನು ಬಯಸುತ್ತದೆ, ಆದರೆ ಅದರ ಸಾರ್ವಭೌಮತ್ವವು ಸರ್ವೋಚ್ಚವಾಗಿದೆ ಎಂದು ಪ್ರಧಾನಿ ಹೇಳಿದರು.

ನಮ್ಮ ಭೂಮಿಯ ಒಂದಿಂಚಿನ ಮೇಲೂ ಕಣ್ಣಿಡಲು ಯಾರಿಗೂ ಸಾಧ್ಯವಿಲ್ಲ. ಹಾಗೆ ಮಾಡುವ ಸಾಮರ್ಥ್ಯ ಇಂದು ನಮ್ಮಲ್ಲಿದೆ. ಏಕ ಕಾಲದಲ್ಲಿ ಹಲವು ಕಡೆ ಸಂಚರಿಸಿ ದಾಳಿ ನಡೆಸಬಲ್ಲ ಸಾಮರ್ಥ್ಯ ಭಾರತದ ಸಶ್ತ್ರ ಪಡೆಗಳಿಗೆ ಇದೆ ಎಂದು ಪ್ರಧಾನಿ ಮೋದಿ ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದರು.

ನಮ್ಮ ಭೂ ಪ್ರದೇಶವನ್ನು ರಕ್ಷಿಸಿಕೊಳ್ಳಲು ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಸಶ್ತ್ರ ಪಡೆಗಳು ಮಾಡಲಿವೆ. ಅದು ಸೇನಾ ನಿಯೋಜನೆ ಇರಬಹುದು, ಭೂಮಿ ಮೇಲಿನ ಅಥವಾ ಸಾಗರದಲ್ಲಿನ ಕ್ರಮ ಯಾವುದೇ ಆಗಿರಬಹುದು ಎಂದು ಮೋದಿ ಹೇಳಿದರು.

ನಮ್ಮ ಗಡಿಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಕಳೆದ ಕೆಲವು ವರ್ಷಗಳಿಂದ ಗಡಿ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಮ್ಮ ಸಶಸ್ತ್ರ ಪಡೆಗಳಿಗೆ, ಯುದ್ಧವಿಮಾನಗಳಿಗೆ, ಅತ್ಯಾಧುನಿಕ ಹೆಲಿಕಾಪ್ಟರ್‌ಗಳಿಗೆ ಹಾಗೂ ಕ್ಷಿಪಣಿ ವ್ಯವಸ್ಥೆಗಳ ಅಗತ್ಯಕ್ಕನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ತಿಳಿಸಿದರು.

SCROLL FOR NEXT