ದೇಶ

ಪುರಿ ಜಗನ್ನಾಥ ರಥಯಾತ್ರೆ ತಡೆ ಪ್ರಶ್ನಿಸಿ ಅರ್ಜಿ: ಸುಪ್ರೀಂ ಕೋರ್ಟ್ ನಲ್ಲಿ ಇಂದು ವಿಚಾರಣೆ

Sumana Upadhyaya

ನವದೆಹಲಿ: ಐತಿಹಾಸಿಕ ಪುರಿ ಜಗನ್ನಾಥ ರಥೋತ್ಸವಕ್ಕೆ ತಡೆ ನೀಡಿದ್ದನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಸೋಮವಾರ ನಡೆಯಲಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಐತಿಹಾಸಿಕ ಯಾತ್ರೆ ಈ ವರ್ಷ ನಡೆಸಬಾರದೆಂದು ಸುಪ್ರೀಂ ಕೋರ್ಟ್ ಕಳೆದ 18ರಂದು ಆದೇಶ ನೀಡಿತ್ತು. ಈ ಆದೇಶ ಹೊರಬಂದ ಮರುದಿನ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಆದೇಶದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ರಥಯಾತ್ರೆಗೆ ಅನುವು ಮಾಡಿಕೊಡಬೇಕೆಂದು ಮನವಿ ಸಲ್ಲಿಸಲಾಗಿತ್ತು.

ಒಡಿಶಾದ ಪುರಿ ಜಗನ್ನಾಥ ರಥ ಯಾತ್ರೆ ಪ್ರತಿವರ್ಷ 10ರಿಂದ 12 ದಿನಗಳ ಕಾಲ ನಡೆಯುತ್ತದೆ, ಲಕ್ಷಾಂತರ ಜನರು ಈ ಯಾತ್ರೆಗೆ ಸಾಕ್ಷಿಯಾಗುತ್ತಾರೆ. ಜೂನ್ 23ಕ್ಕೆ ನಿಗದಿಯಾಗಿದ್ದ ಬಹುದ ಜಾತ್ರೆಯನ್ನು ನಂತರ ಜುಲೈ 1ಕ್ಕೆ ಮುಂದೂಡಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶ ನೀಡಿ ಈ ವರ್ಷ ರಥಯಾತ್ರೆ ನಡೆಸುವುದು ಬೇಡ ಎಂದು ಆದೇಶ ಕೊಟ್ಟಿತು.

ಜಗನ್ನಾಥ, ಬಾಲಭದ್ರ ಮತ್ತು ದೇವಿ ಸುಭದ್ರ ಮೂರ್ತಿಗಳನ್ನು ಭವ್ಯವಾದ ಮರದ ರಥದಲ್ಲಿ ಕೂರಿಸಿ ಸಾವಿರಾರು ಮಂದಿ ಭಕ್ತರು ಮೂರು ಕಿಲೋ ಮೀಟರ್ ದೂರದಿಂದ 9 ದಿನಗಳ ಉತ್ಸವದಲ್ಲಿ 2 ಬಾರಿ ರಥ ಎಳೆಯುತ್ತಾರೆ.

ಪುರಿ ಜಗನ್ನಾಥ ಎಂದರೆ ಸಾವಿರಾರು ಮಂದಿಯ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ವಿಷಯವಾಗಿದ್ದು, ರಥ ಯಾತ್ರೆಯನ್ನು ಈ ವರ್ಷ ರದ್ದುಪಡಿಸುವ ಬದಲು ಬದಲಾವಣೆಗಳನ್ನು ಮಾಡಿ ಅನುಮತಿ ಕೊಡಬೇಕೆಂದು ಜಗನ್ನಾಥ ಸಂಸ್ಕೃತಿ ಜನ ಜಾಗರಣ ವೇದಿಕೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.

SCROLL FOR NEXT