ದೇಶ

ದೆಹಲಿ ಆಯ್ತು, ಈಗ ಮೇಘಾಲಯದಲ್ಲೂ ಸಿಎಎ ಪರ-ವಿರೋಧಿ ಸಂಘರ್ಷ: 10 ಜನರಿಗೆ ಚಾಕು ಇರಿತ, ಇಬ್ಬರ ಸಾವು

Srinivasamurthy VN

ಶಿಲ್ಲಾಂಗ್: 42 ಮಂದಿಯ ಸಾವಿಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಪರ-ವಿರೋದಿ ಸಂಘರ್ಷ ಮೇಘಾಲಯಕ್ಕೂ ವ್ಯಾಪಿಸಿದ್ದು, ಶಿಲ್ಲಾಂಗ್ ನಲ್ಲಿ ನಡೆದ ಸಂಘರ್ಷದಲ್ಲಿ 10 ಮಂದಿಗೆ ಚಾಕು ಇರಿಯಲಾಗಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಶಿಲ್ಲಾಂಗ್ ನಲ್ಲಿ ನಡೆಯುತ್ತಿದ್ದ ಸಿಎಎ ಪರ-ವಿರೋಧಿ ಪ್ರತಿಭಟನೆ ಶನಿವಾರ ಹಿಂಸಾಚಾರಕ್ಕೆ ತಿರುಗಿದ್ದು, ನಗರದಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶಿಲ್ಲಾಂಗ್‌ನ ಜಯಾವ್‌, ಲಾಂಗ್‌ಸ್ನಿಂಗ್‌ ಮತ್ತು ಚಿರಾಪುಂಚಿ ಪಟ್ಟಣದ ಐವ್‌ ಸೊಹ್ರಾ ಮಾರುಕಟ್ಟೆಗಳಲ್ಲಿ ಘರ್ಷಣೆ ನಡೆದಿದ್ದು, ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ. ಇನ್ನು ಬಾಂಗ್ಲಾದೇಶ ಗಡಿಯ ಸಮೀಪದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಇಚಮತಿ ಪ್ರದೇಶದಲ್ಲಿ ಖಾಸಿ ವಿದ್ಯಾರ್ಥಿ ಸಂಘಟನೆ ಸದಸ್ಯರು ಮತ್ತು ಸ್ಥಳೀಯರಲ್ಲದವರ ನಡುವೆ ಘರ್ಷಣೆ ಸಂಭವಿಸಿದ ಪರಿಣಾಮ ಸ್ಥಳೀಯ ಟ್ಯಾಕ್ಸಿ ಚಾಲಕನೊಬ್ಬ ಹತ್ಯೆಯಾಗಿದ್ದಾನೆ. ಅಲ್ಲದೆ ಹಿಂಸಾಚಾರದಲ್ಲಿ 10 ಮಂದಿಗೆ ಚಾಕುವಿನಿಂದ ಇರಿಯಲಾಗಿದೆ. ಒಟ್ಟಾರೆ ಹಿಂಸಾಚಾರದಲ್ಲಿ ಈ ವರೆಗೂ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗಲಭೆ ಪೀಡಿತ ಶಿಲ್ಲಾಂಗ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕರ್ಫ್ಯೂ ಘೋಷಿಸಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಈಗಾಗಲೇ ಮೇಘಾಲಯಕ್ಕೆ ಆಗಮಿಸಿದ್ದು, ಇನ್ನೂ ಆರು ತುಕಡಿಗಳು ಬರಲಿವೆ ಎಂದು ಹೇಳಲಾಗಿದೆ.  ಘಟನೆಯ ನಂತರ ಎಂಟು ಜನರನ್ನು ಬಂಧಿಸಲಾಗಿದ್ದು, ವಿಚಾರಣೆ ಆರಂಭಿಸಲಾಗಿದೆ.

ಮೇಘಾಲಯ ಮುಖ್ಯಮಂತ್ರಿ ಸಂಗ್ಮಾ ಅವರು,‘ಜನರು ಹಿಂಸಾಚಾರದಿಂದ ದೂರವಿರಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ‘ ಎಂದು ಹೇಳಿದ್ದಾರೆ.
 

SCROLL FOR NEXT