ದೇಶ

ದೆಹಲಿ ಹಿಂಸಾಚಾರ: 167 ಎಫ್ ಐಆರ್ ದಾಖಲು, ಮಾರ್ಚ್ 7ರವರೆಗೆ ಶಾಲಾ ಕಾಲೇಜು ಬಂದ್ 

Sumana Upadhyaya

ನವದೆಹಲಿ: ಈಶಾನ್ಯ ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಸದ್ಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದು ಜನರು ದಿನನಿತ್ಯದ ವ್ಯವಹಾರಕ್ಕೆ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಜನರ ಅಗತ್ಯ ಬಳಕೆಯ ವಸ್ತುಗಳ ಅಂಗಡಿಗಳು ನಿನ್ನೆಯಿಂದ ತೆರೆದಿವೆ. 


ಈ ಮಧ್ಯೆ ಭದ್ರತಾ ಪಡೆ ಯೋಧರ ಗಸ್ತು ತಿರುಗಾಟ ಪ್ರದೇಶದಲ್ಲಿ ಮುಂದುವರಿದಿದೆ. ಆದರೂ ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಮಾರ್ಚ್ 7ರವರೆಗೆ ಇನ್ನೊಂದು ವಾರ ಶಾಲಾ, ಕಾಲೇಜುಗಳು ಮುಚ್ಚಿರುತ್ತವೆ.ಆದರೆ 10 ಮತ್ತು 12ನೇ ತರಗತಿಯವರಿಗೆ ನಿಗದಿಯಾಗಿದ್ದ ಪರೀಕ್ಷೆ ನಾಳೆಯಿಂದ ನಡೆಯಲಿದೆ.


ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಸಿಬಿಎಸ್ ಇ ದೆಹಲಿ ಹೈಕೋರ್ಟ್ ನಲ್ಲಿ ಅಫಿಡವಿಟ್ಟು ಸಲ್ಲಿಸಿ ಪರೀಕ್ಷೆ ವೇಳೆ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡಿತ್ತು. ಈ ಹಿನ್ನಲೆಯಲ್ಲಿ ದೆಹಲಿ ಹೈಕೋರ್ಟ್ ದೆಹಲಿ ಪೊಲೀಸ್ ಮತ್ತು ಸರ್ಕಾರಕ್ಕೆ ಆದೇಶ ನೀಡಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಕೇಳಿದೆ.


ಈ ಕೊನೆ ಕ್ಷಣದಲ್ಲಿ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಲು ಸಾಧ್ಯವಿಲ್ಲ, ಹೀಗಾಗಿ ಪರೀಕ್ಷೆ ನಡೆಯುವ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ.


ದೆಹಲಿಯ ಜಫ್ರಾಬಾದ್, ಮೌಜ್ ಪುರ್, ಯಮುನಾ ವಿಹಾರ್, ಚಾಂದ್ ಬಾಗ್, ಮುಸ್ತಾಫಾ ಬಾದ್, ಬಜನ್ ಪುರ್ ಕೋಮು ಹಿಂಸಾಚಾರಕ್ಕೆ ನಲುಗಿ ಹೋದ ಪ್ರದೇಶಗಳಾಗಿವೆ.

SCROLL FOR NEXT