ದೇಶ

ಕೊರೋನಾ ವೈರಸ್: ಗಡಿ, ವಿಮಾನ ನಿಲ್ದಾಣಗಳಲ್ಲಿ 16 ಲಕ್ಷ ಜನರಿಗೆ ವೈದ್ಯಕೀಯ ಪರೀಕ್ಷೆ- ಜಾವಡೇಕರ್

Lingaraj Badiger

ನವದೆಹಲಿ: ಇಡೀ ಜಗತ್ತನ್ನು ವ್ಯಾಪಿಸುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಬುಧವಾರ ಹೇಳಿದ್ದಾರೆ.

ಕೇಂದ್ರ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, COVID-19 (ಕೊರೋನಾ ವೈರಸ್) ಅನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಪ್ರತಿದಿನ ವಿಡಿಯೋ ಸಂವಾದಗಳನ್ನು ನಡೆಸಲಾಗುತ್ತಿದೆ ಮತ್ತು ಪರಿಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಕ್ರಮಗಳು ನಡೆಯುತ್ತವೆ ಎಂದು ತಿಳಿಸಿದ್ದಾರೆ.

ದೇಶದ 21 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಇದುವರೆಗೆ ಆರು ಲಕ್ಷ ಪ್ರಯಾಣಿಕರನ್ನು ಪರೀಕ್ಷಿಸಲಾಗಿದೆ. ಸುಮಾರು 10 ಲಕ್ಷ ಜನರನ್ನು ಗಡಿಗಳಲ್ಲಿ ಜನರ ತಪಾಸಣೆಗೊಳಪಡಿಲಾಗಿದೆ ಎಂದು ಜಾವಡೇಕರ್ ಹೇಳಿದ್ದಾರೆ.

ಮಾರಕ ವೈರಸ್‌ಗೆ ಸಂಬಂಧಿಸಿದ ಪರೀಕ್ಷೆಗಳು ಮತ್ತು ಇತರ ಅಂಶಗಳ ದೃಷ್ಟಿಯಿಂದ ಮುಂದಿನ ಎರಡು ದಿನಗಳಲ್ಲಿ 19 ಹೊಸ ವೈರಾಣು ಪ್ರಯೋಗಾಯಲಗಳನ್ನು ಸ್ಥಾಪಿಸಲಾಗುತ್ತಿದೆ. ಕೋರೋನಾ ವೈರಸ್ ಸೋಂಕಿನಿಂದ ಎದುರಾಗುವ ಈ ಪರಿಸ್ಥಿತಿಯನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಲಾಗಿದೆ ಮತ್ತು ಈ ವಿಷಯ ಸಚಿವ ಸಂಪುಟ ಸಭೆಗಳ ಭಾಗವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಗುರುಗ್ರಾಮ್‌ನ ಮನೇಸರ್‌ನಲ್ಲಿ ನಿರ್ಬಂಧಿತ ಸೌಲಭ್ಯವನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ವೈರಸ್ ಸೋಂಕಿತ ಜಪಾನಿನ ಹಡಗಿನಿಂದ ರಕ್ಷಿಸಲ್ಪಟ್ಟ ಭಾರತೀಯರಿದ್ದಾರೆ ಎಂದು ಜಾವಡೇಕರ್ ಹೇಳಿದ್ದಾರೆ.

SCROLL FOR NEXT